Odisha Train Accident: ಒಡಿಶಾದ ಬಾಲಸೋರ್ ಬಳಿ ಸಂಭವಿಸಿರುವ ಭೀಕರ ರೈಲು ಅಪಘಾತದಲ್ಲಿ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ...
ಒಡಿಶಾದ ಬಾಲಸೋರ್ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿ ಅಪಾರ ಪ್ರಮಾಣದ ಸಾವು-ನೋವು ಆಗಿದೆ. ದುರಂತ ಸಂಭವಿಸುವ ಕೆಲ ನಿಮಿಷಗಳ ಮೊದಲು ರೈಲು ತಪ್ಪಾದ ಟ್ರ್ಯಾಕ್ನಲ್ಲಿ ಸಾಗಿದ್ದೇ ಘಟನೆ ಕಾರಣವಿರಬಹುದೆಂದು ರೈಲ್ನೆ ಸಿಗ್ನಲಿಂಗ್ ಕಂಟ್ರೋಲ್ ರೂಂನ ಪ್ರಾಥಮಿಕ ವರದಿ ತಿಳಿಸಿದೆ.
ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಅಫಘಾತದಲ್ಲಿ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅನೇಕರು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಈ ದುರಂತಕ್ಕೆ ಮಾನವ ದೋಷ (ಹ್ಯೂಮನ್ ಎರರ್) ಕಾರಣವೆಂದು ತಿಳಿದುಬಂದಿದೆ. ಆದರೆ ಸಂಪೂರ್ಣ ಪರೀಕ್ಷೆಯ ನಂತರವೇ ಅಪಘಾತದ ಕಾರಣ ತಿಳಿದುಬರಬೇಕಿದೆ.
ರೈಲ್ವೆಯ ಖರಗ್ಪುರ ವಿಭಾಗದ ಸಿಗ್ನಲಿಂಗ್ ಕಂಟ್ರೋಲ್ ರೂಂನ ವಿಡಿಯೋ ಪ್ರಕಾರ, ಚೆನ್ನೈಗೆ ಹೋಗುವ ಕೋರಮಂಡಲ್ ಎಕ್ಸ್ಪ್ರೆಸ್ ಶುಕ್ರವಾರ ಸಂಜೆ 6.55ಕ್ಕೆ ಬಹಾನಗರ್ ಬಜಾರ್ ನಿಲ್ದಾಣ ದಾಟಿದ ಬಳಿಕ ಮುಖ್ಯ ಮಾರ್ಗದ ಬದಲಿಗೆ ಗೂಡ್ಸ್ ರೈಲು ನಿಲುಗಡೆ ಮಾಡಿದ ಲೂಪ್ ಲೈನ್ನಲ್ಲಿ ಸಾಗಿತು ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗಂಟೆಗೆ ಸುಮಾರು 127 KM ವೇಗದಲ್ಲಿ ಚಲಿಸುತ್ತಿದ್ದ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಮುಖ್ಯ ಮಾರ್ಗದಲ್ಲಿ ಹಳಿ ತಪ್ಪಿದೆ. ಈ ಘರ್ಷಣೆಯ ಕೆಲವೇ ನಿಮಿಷಗಳಲ್ಲಿ ಹೌರಾಕ್ಕೆ ಹೋಗುವ ಯಶವಂತನಗರ ಎಕ್ಸ್ಪ್ರೆಸ್ ಎದುರು ಭಾಗದಿಂದ ಬರುತ್ತಿದ್ದ ಕೋರಮಂಡಲ್ ಎಕ್ಸ್ಪ್ರೆಸ್ಗೆ ಡಿಕ್ಕಿ ಹೊಡೆದಿದೆ ಎಂದು ಎಂದು ರೈಲ್ವೆ ಸಚಿವಾಲಯದ ಅಧಿಕಾರಿ ಮಾಹಿತಿ ನೀಡಿದ್ದಾರೆ.
ದುರಂತ ಹೇಗೆ ಸಂಭವಿಸಿತು ಮತ್ತು ಏಕೆ ಸಂಭವಿಸಿತು ಎಂಬುದು ರೈಲ್ವೆ ಮಂಡಳಿ ಆದೇಶಿಸಿರುವ ವಿವರವಾದ ತನಿಖೆಯಿಂದ ತಿಳಿದುಬರಲಿದೆ. ಆದರೆ ಮೇಲ್ನೋಟಕ್ಕೆ ಇದು ಮಾನವ ದೋಷವೆಂದು ತೋರುತ್ತದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.