Joginder Sharma Life Now and Then: ಕೇವಲ ಒಂದೇ ಒಂದು ಪಂದ್ಯದಲ್ಲಿ ಹೀರೋ ಎನಿಸಿಕೊಂಡ ಜೋಗಿಂದರ್ ಶರ್ಮಾ ಅವರನ್ನು ಭಾರತೀಯ ಕ್ರಿಕೆಟ್ ಲೋಕ...
ಕೇವಲ ಒಂದೇ ಒಂದು ಪಂದ್ಯದಲ್ಲಿ ಹೀರೋ ಎನಿಸಿಕೊಂಡ ಜೋಗಿಂದರ್ ಶರ್ಮಾ ಅವರನ್ನು ಭಾರತೀಯ ಕ್ರಿಕೆಟ್ ಲೋಕ ಮರೆಯಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಅವರ ಹೆಸರು ಕ್ರಿಕೆಟ್ ಇತಿಹಾಸದಲ್ಲಿ ಶಾಶ್ವತವಾಗಿ ದಾಖಲಾಗಿದೆ.
ಮಹೇಂದ್ರ ಸಿಂಗ್ ಧೋನಿಯ ನಾಯಕತ್ವದಲ್ಲಿ, ಭಾರತ ತಂಡವು T20 ವಿಶ್ವಕಪ್ 2007ರಲ್ಲಿ ಟ್ರೋಫಿ ಎತ್ತಿಹಿಡಿದಿತ್ತು. ಅಂದಿನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಇದೇ ಜೋಗಿಂದರ್ ಶರ್ಮಾ.
ಜೋಗಿಂದರ್ ಶರ್ಮಾ ಅಕ್ಟೋಬರ್ 23, 1983 ರಂದು ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ಜನಿಸಿದರು. ವಿಶ್ವಚಾಂಪಿಯನ್ ತಂಡದಿಂದ ಹೊರಬಂದ ಶರ್ಮಾ ಇದೀಗ ಪೊಲೀಸ್ ಡಿಎಸ್ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವಿಶ್ವಕಪ್ ಫೈನಲ್ ನಡೆದರೆ ಅದೂ ಕೂಡ ಪಾಕಿಸ್ತಾನದಂತಹ ಪ್ರತಿಸ್ಪರ್ಧಿ ವಿರುದ್ಧವೇ ರೋಚಕತೆ ಉತ್ತುಂಗಕ್ಕೇರುವುದು ಸಹಜ. 24 ಸೆಪ್ಟೆಂಬರ್ 2007 ರಂದು ಭಾರತೀಯ ತಂಡ ಮತ್ತು ಅಭಿಮಾನಿಗಳ ಸ್ಥಿತಿಯೂ ಇದೇ ಆಗಿತ್ತು.
ಪಂದ್ಯದ ಅಂತಿಮ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ವೇಗಿ ಜೋಗಿಂದರ್ ಶರ್ಮಾಗೆ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ವಹಿಸಿದ್ದರು. ಈ ನಿರ್ಧಾರವನ್ನು ಅನೇಕರು ಹೀಯಾಳಿಸಿದ್ದು ಕೂಡ ಇದೆ. ಆದರೆ ಅಂದು ನಡೆದಿದ್ದೇ ಬೇರೆ.
ಕೊನೆಯ ಓವರ್’ನಲ್ಲಿ ಪಾಕಿಸ್ತಾನಕ್ಕೆ 13 ರನ್’ಗಳ ಅಗತ್ಯವಿತ್ತು. ಜೋಗಿಂದರ್ ಮೊದಲ ಎಸೆತವನ್ನು ವೈಡ್ ಮಾಡಿದರು. ಮುಂದಿನ ಎಸೆತದಲ್ಲಿ ಉತ್ತಮ ಕಂಬ್ಯಾಕ್ ಮಾಡಿದ ಅವರು ಯಾವುದೇ ರನ್ ನೀಡಲಿಲ್ಲ. ಪಾಕಿಸ್ತಾನದ ಮಿಸ್ಬಾ-ಉಲ್-ಹಕ್ ಎರಡನೇ ಲೀಗಲ್ ಬಾಲ್’ನಲ್ಲಿ ಪ್ರಬಲ ಸಿಕ್ಸರ್ ಬಾರಿಸುವ ಮೂಲಕ ಭಾರತದ ಭರವಸೆಯನ್ನು ಮತ್ತಷ್ಟು ಹುಸಿಗೊಳಿಸಿದರು.
ಈ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಗೆಲ್ಲಲು ಒಟ್ಟು 6 ರನ್’ಗಳ ಅಗತ್ಯವಿತ್ತು, ಇನ್ನೊಂದೆಡೆ ಭಾರತಕ್ಕೆ ಒಂದು ವಿಕೆಟ್ ಬೇಕಿತ್ತು. ಜೋಗಿಂದರ್ ಶರ್ಮಾ ಮುಂದಿನ ಎಸೆತದಲ್ಲಿ ಫುಲ್ ಲೆಂಗ್ತ್ ಬಾಲ್ ಎಸೆದು ಮಿಸ್ಬಾನನ್ನು ಔಟ್ ಮಾಡಿದರು. ಅಂದರೆ ಮಿಸ್ಬಾ ಶಾರ್ಟ್ ಫೈನ್ ಲೆಗ್ ಮೇಲೆ ಸ್ಕೂಪ್ ಶಾಟ್ ಆಡಲು ಹೋಗಿ, ಶ್ರೀಶಾಂತ್’ಗೆ ಕ್ಯಾಚ್ ನೀಡಿದರು.
ಶ್ರೀಶಾಂತ್ ಕ್ಯಾಚ್ ಹಿಡಿಯುತ್ತಿದ್ದಂತೆ ಭಾರತ ವಿಶ್ವ ಚಾಂಪಿಯನ್ ಆಗಿತ್ತು. ಅಷ್ಟೇ ಅಲ್ಲದೆ, ಜೋಗಿಂದರ್ ಹೀರೋ ಆಗಿ ಮಿಂಚಿದ್ದರು. ಪ್ರಶಸ್ತಿ ಸುತ್ತಿನ ಕೊನೆಯ ಓವರ್ ಬೌಲ್ ಮಾಡಿದ ಜೋಗಿಂದರ್ ಶರ್ಮಾ ಕೇವಲ 4 ಎಸೆತಗಳಲ್ಲಿ ನ್ಯಾಷನಲ್ ಹೀರೋ ಎನಿಸಿಕೊಂಡಿದ್ದು ಸುಳ್ಳಲ್ಲ.
ಆದರೆ ಆ ಫೈನಲ್ ಪಂದ್ಯದ ನಂತರ ಜೋಗಿಂದರ್’ಗೆ ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ ಎಂಬುದು ವಿಷಾದದ ಸಂಗತಿ.
2011 ರಲ್ಲಿ ಜೋಗಿಂದರ್ ಅಪಘಾತಕ್ಕೆ ತುತ್ತಾದರು. ತಲೆಗೆ ಗಂಭೀರ ಗಾಯವಾಗಿತ್ತು. ವೈದ್ಯರು ಕೂಡ ಭರವಸೆಯನ್ನು ಕೈಬಿಟ್ಟಿದ್ದರು, ಆದರೆ ಜೋಗಿಂದರ್ ಧೈರ್ಯದಿಂದ ಹೋರಾಡಿ ಬದುಕಿನಲ್ಲಿ ಯುಟರ್ನ್ ಪಡೆದುಕೊಂಡರು. ಅದಾದ ಬಳಿಕ ಜೋಗಿಂದರ್ ಹರಿಯಾಣ ರಣಜಿ ತಂಡದಲ್ಲಿ ಆಡಲು ಪ್ರಾರಂಭಿಸಿದರು. ಇದೀಗ ಅವರನ್ನು ಹರಿಯಾಣ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿಯಾಗಿ ನೇಮಿಸಲಾಗಿದೆ.