Home> Karnataka
Advertisement

ವಿಎಚ್‌ಪಿ ಅಲ್ಲ ‘ವಿಶ್ವ ವಿನಾಶಕ ಪರಿಷತ್': ಧರ್ಮೋದ್ಧಾರದ ಸೋಗಿನಲ್ಲಿ ಅಶಾಂತಿ ಸೃಷ್ಟಿ- ಎಚ್​ಡಿಕೆ

ಧರ್ಮ ರಕ್ಷಣೆ ಎಂದರೆ ಇನ್ನೊಬ್ಬರ ಅನ್ನ ಕಸಿಯುವುದಲ್ಲ, ನೆಮ್ಮದಿಯ ನಾಡಿಗೆ ಕಿಚ್ಚಿಡುವುದಲ್ಲ, ಮನಸ್ಸುಗಳನ್ನು ಒಡೆದು ದೇಶವನ್ನು ‘ಒಡೆದ ಮಡಿಕೆʼ ಮಾಡುವುದಲ್ಲ. ದೇಶವೆಂದರೆ ಮಣ್ಣಲ್ಲ, ಮನುಷ್ಯರು’ ಎಂದು ಎಚ್​ಡಿಕೆ ಟ್ವೀಟ್ ಮಾಡಿದ್ದಾರೆ.

ವಿಎಚ್‌ಪಿ ಅಲ್ಲ ‘ವಿಶ್ವ ವಿನಾಶಕ ಪರಿಷತ್': ಧರ್ಮೋದ್ಧಾರದ ಸೋಗಿನಲ್ಲಿ ಅಶಾಂತಿ ಸೃಷ್ಟಿ- ಎಚ್​ಡಿಕೆ

ಬೆಂಗಳೂರು: ವಿಶ್ವ ಹಿಂದೂ ಪರಿಷತ್‌, ‘ವಿಶ್ವ ವಿನಾಶಕ ಪರಿಷತ್‌ʼ ಅಥವಾ ‘ಧರ್ಮ ವಿನಾಶಕ ಪರಿಷತ್‌ʼ ಆಗುವುದು ಬೇಡ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಕಿಡಿಕಾರಿದ್ದಾರೆ. ಈ ಬಗ್ಗೆ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, ಹಲಾಲ್ ಕಟ್ V/S ಜಟ್ಕಾ ಕಟ್ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಪರ ಸಂಘಟನೆಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

‘ಕರಪತ್ರಗಳನ್ನು ಹಂಚಿ ಸಮಾಜ ಒಡೆಯುತ್ತಿರುವ ವಿಶ್ವ ಹಿಂದೂ ಪರಿಷತ್‌(Vishva Hindu Parishad), ಬಜರಂಗದಳ(Bajrang Dal)ದ ಬಗ್ಗೆ ನನ್ನ ಹೇಳಿಕೆಯಲ್ಲಿ ಯಾವ ಬದಲಾವಣೆಯೂ ಇಲ್ಲ. ಧರ್ಮ-ಜಾತಿ ಆಧಾರದ ಮೇಲೆ ಜನರನ್ನು ವಿಘಟಿಸುವ ಇಂಥ ಸಂಘಟನೆಗಳ ಕಿಡಿಗೇಡಿಗಳ ಬಗ್ಗೆ ನನ್ನ ನಿಲುವು ಅಚಲ. ‘ಧರ್ಮೋದ್ಧಾರದ ಸೋಗಿನಲ್ಲಿ ಅಶಾಂತಿ’ ಸೃಷ್ಟಿಸುವ ಕೃತ್ಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ’ವೆಂದು ಅವರು ಹೇಳಿದ್ದಾರೆ.

‘ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ.ಇದು ವಿಶ್ವ ಹಿಂದೂ ಪರಿಷತ್‌, ಬಜರಂಗದಳ(Bajrang Dal)ದ ಜಹಗೀರಲ್ಲ. ಇವೇನು ಹಿಂದೂಗಳ ಪ್ರಾತಿನಿಧಿಕ ಸಂಸ್ಥೆಗಳೂ ಅಲ್ಲ. ಒಂದು ರಾಜಕೀಯ ಪಕ್ಷದ ಬಾಲಂಗೋಚಿಗಳಷ್ಟೇ. ಹಿಂದೂ, ಹಿಂದುತ್ವ ಎನ್ನುವ ಪರಂಪರೆ ಇವರ ಗುತ್ತಿಗೆಯಲ್ಲ. ‘ಧರ್ಮೋ ರಕ್ಷತಿ ರಕ್ಷಿತಃʼ ಎನ್ನುವುದರ ಅರಿವು ನನಗೂ ಇದೆ. ಧರ್ಮ ರಕ್ಷಣೆ ಎಂದರೆ ಇನ್ನೊಬ್ಬರ ಅನ್ನ ಕಸಿಯುವುದಲ್ಲ, ನೆಮ್ಮದಿಯ ನಾಡಿಗೆ ಕಿಚ್ಚಿಡುವುದಲ್ಲ, ಮನಸ್ಸುಗಳನ್ನು ಒಡೆದು ದೇಶವನ್ನು ‘ಒಡೆದ ಮಡಿಕೆʼ ಮಾಡುವುದಲ್ಲ. ದೇಶವೆಂದರೆ ಮಣ್ಣಲ್ಲ, ಮನುಷ್ಯರು’ ಎಂದು ಎಚ್​ಡಿಕೆ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ನಾನು ಹಿಂದೂ ಅಲ್ಲ- ಯಾರಾದ್ರು ಕೇಸ್‌ ಹಾಕಿದ್ರೆ ನನ್ನ ಪರವಾಗಿ ನ್ಯಾಯಮೂರ್ತಿ ಇದ್ದಾರೆ- ಕುಂ.ವೀರಭದ್ರಪ್ಪ

‘ವಿಶ್ವ ಹಿಂದೂ ಪರಿಷತ್‌, ‘ವಿಶ್ವ ವಿನಾಶಕ ಪರಿಷತ್‌ʼ ಅಥವಾ ‘ಧರ್ಮ ವಿನಾಶಕ ಪರಿಷತ್‌ʼ ಆಗುವುದು ಬೇಡ. ಬಜರಂಗದಳ ಭಾವನೆಗಳ ಭಯೋತ್ಪಾದಕ ಆಗುವದು ಬೇಡ. ಹಿಂದೂ ಧರ್ಮದ ನಾಶ ಚಕ್ರವರ್ತಿ, ಸಾಮ್ರಾಟರಿಗೇ ಆಗಲಿಲ್ಲ. ಹಿಂದುತ್ವ ಅಂದೂ ಉಳಿದಿತ್ತು, ಮುಂದೆಯೂ ಉಳಿಯುತ್ತದೆ. ನಿಮ್ಮ ಕಿತಾಪತಿ ಏಕೆ? ಕೊರೋನಾ(CoronaVirus) ಕಾಲದಲ್ಲಿ ನೀವೊಬ್ಬರೇ ಜನರ ಸೇವೆ ಮಾಡಿಲ್ಲ. ಎಲ್ಲರೂ ಜಾತಿ-ಧರ್ಮ ಮೀರಿ ಸೇವೆ ಮಾಡಿದ್ದಾರೆ. ‘ಶವ ಸಂಸ್ಕಾರದಲ್ಲೂ ಕೀರ್ತಿʼಯನ್ನು ಹುಡುಕುವ ನಿಮ್ಮಗಳ ವಿಕೃತ ಮನಸ್ಥಿತಿಗೆ ನನ್ನ ಮರುಕವಿದೆ. ಇದಾ ನಿಮ್ಮ ಧರ್ಮ?’ವೆಂದು ಪ್ರಶ್ನಿಸಿದ್ದಾರೆ.

‘ಸೋಂಕಿಗೆ ಬಲಿಯಾದವರ ಪಾರ್ಥೀವ ಶರೀರಗಳನ್ನು ನೀವು ಬಾಲಂಗೋಚಿ ಆಗಿರುವ ಪಕ್ಷದ ಸರ್ಕಾರ ಹೇಗೆ ಕಂಡಿತು ಎಂಬುದಕ್ಕೆ ದಿವಂಗತ ಕೇಂದ್ರ ಮಂತ್ರಿ ಸುರೇಶ ಅಂಗಡಿ(Suresh Angadi)ಯವರೇ ಸಾಕ್ಷಿ. ಅವರ ಅಂತ್ಯಕ್ರಿಯೆ ಹೇಗಾಯಿತು ಎಂದು ಮಾಧ್ಯಮಗಳ ಮೂಲಕ ಕಣ್ಣಾರೆ ನೋಡಿದ್ದೇನೆ. ಅಂದು ಕೇಂದ್ರ-ರಾಜ್ಯ ಸರ್ಕಾರಗಳ ವೈಫಲ್ಯಗಳು ಯಾವ ಮಟ್ಟದಲ್ಲಿದ್ದವು? ಬೆಂಗಳೂರಿನಲ್ಲಿ ಯಾರೆಲ್ಲ ಶವ ಸಂಸ್ಕಾರ ಮಾಡಿದರು ಎನ್ನುವುದನ್ನು ನಾವೂ  ಮಾಧ್ಯಮಗಳಲ್ಲಿ ಕಂಡಿದ್ದೇವೆ. ಆಗ ಇವರೆಲ್ಲ ಎಲ್ಲಿದ್ದರೋ ನನಗಂತೂ ಗೊತ್ತಿಲ್ಲ’ ಅಂತಾ ಹೇಳಿದ್ದಾರೆ.

‘ಡಿಜೆ ಹಳ್ಳಿ ಗಲಭೆ ಕಾರಣದ ಬಗ್ಗೆ ನೀವು ಏಕೆ ದನಿಯೆತ್ತುವುದಿಲ್ಲ? ಠಾಣೆಗೆ ಬೆಂಕಿ ಬಿದ್ದಾಗ ಅದರಲ್ಲಿ ಚಳಿ ಕಾಯಿಸಿಕೊಂಡವರು ನೀವು. ಧರ್ಮದ ಪಾಠ ಮಾಡುವ ನೀವು, ಧರ್ಮಗುರುಗಳಿಗೆ ಗೌರವ ಕೊಡಬೇಕು ಎನ್ನುವುದನ್ನೂ ತಿಳಿದಿರಬೇಕಲ್ಲವೇ? ನೀವು ಬಾಲಂಗೋಚಿ ಆಗಿರುವ ಸರ್ಕಾರದ ಬೇಹುಗಾರಿಕೆ ವಿಭಾಗ ನಿದ್ದೆ ಮಾಡುತ್ತಿತ್ತು, ಏಕೆ? ಧರ್ಮ ರಕ್ಷಣೆ ಎಂದರೆ ಶಿವಮೊಗ್ಗದಲ್ಲಿ ಸಚಿವರೇ 144‌ ಸೆಕ್ಷನ್ ಉಲ್ಲಂಘಿಸುವುದಾ? ಅವರೇ ನಿಂತು ಹಿಂಸೆಗೆ ಪ್ರಚೋದನೆ ಕೊಡುವುದಾ? ನಾವ್ಯಾರೂ ಹೀಗೆ ಮಾಡಿಲ್ಲ. ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಿ ಎಂದು ನೇರವಾಗಿ ಹೇಳಿದ್ದೇನೆ. ಹಿಜಾಬ್‌(Karnataka Hijab Row) ಗಲಾಟೆ ಹಿಂದಿರುವ ಕಾಣದ ಕೈಗಳಿಗೆ ಕೊಳ ಹಾಕಿ ಎಂದು ಸದನದಲ್ಲೇ ಆಗ್ರಹಿಸಿದ್ದೇನೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಡಿಕೆಶಿ-ಸಿದ್ದರಾಮಯ್ಯ ಒಗ್ಗಟಾಗಿ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲೇ ಬೇಕು: ರಾಹುಲ್ ಗಾಂಧಿ

‘ಜಗತ್ತಿಗೆ ಶಾಂತಿ ಸಂದೇಶ ಕೊಟ್ಟ ಕುವೆಂಪು ಅವರು ಜನಿಸಿದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ಹಬ್ಬ-ಹರಿದಿನದಲ್ಲಿ ನೀವು ಮಾಡುತ್ತಿರುವುದೇನು? ಸೂಕ್ಷ್ಮ ಭಾವನೆಗಳನ್ನು ಕೆರಳಿಸಿ ‘ಅಶಾಂತಿಯ ಅಶ್ವಮೇಧʼ ನಡೆಸುತ್ತಿದ್ದೀರಿ. ಬೆಂಕಿ ಹಾಕುವುದು, ಕಲ್ಲು ಹೊಡೆಯುವುದು ನನ್ನ ಅಥವಾ ನನ್ನ ಪಕ್ಷದ ಸಂಸ್ಕೃತಿ ಅಲ್ಲ. ನಿಮಗೆ ದೇಶ, ಸಂವಿಧಾನದ ಮೇಲೆ ಗೌರವ ಇಲ್ಲ. ಜನರೆಂದರೆ ನಿಮ್ಮ ಪಾಲಿಗೆ ‘ಭಾವನೆಗಳ ದಾಳಗಳುʼ ಮಾತ್ರ. ನಿಜವಾದ ಹಿಂದೂ ಎಂದೂ ಸಮಾಜ ಒಡೆಯಲಾರ. ‘ಹಿಂದೂ ಎಂದರೆ ಎಲ್ಲರೂ ಒಂದು’ ಎನ್ನುವ ಆದರ್ಶ & ಪರಂಪರಾಗತ ನಂಬಿಕೆ. ಈ ನಂಬಿಕೆಯ ಮೇಲೆಯೇ ಭಾರತ ನಿಂತಿದೆ. ಭಾವನೆಗಳನ್ನು ಹೇರಿ ಭಾರತವನ್ನು ಒಡೆಯಲು ನಿಮ್ಮಿಂದ ಸಾಧ್ಯವಿಲ್ಲ’ವೆಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More