Home> Karnataka
Advertisement

ಯುವತಿಗೆ ಮದುವೆ ಆಸೆ ತೋರಿಸಿ ಇಸ್ಲಾಂಗೆ ಮತಾಂತರ: ಯುವಕನ ಬಂಧನ

ಆರೋಪಿ ಮುಯೀನ್ ಮತ್ತು ಯುವತಿ ಪ್ರೀತಿಸುತ್ತಿದ್ದರು. ಮದುವೆಯಾಗಬೇಕಾದರೆ ಮತಾಂತರವಾಗಬೇಕು ಎಂದು ಮುಯೀನ್ ಯುವತಿಯ ಮೇಲೆ ಒತ್ತಡ ಹೇರಿದ್ದನಂತೆ. ಮುಯೀನ್ ಮಾತು ನಂಬಿ ಆತನ ಜೊತೆ ಹೋಗಿದ್ದ ಯುವತಿಯನ್ನು ಕಾನೂನು ಬಾಹಿರವಾಗಿ ಮಸೀದಿಯೊಂದರಲ್ಲಿ ಮತಾಂತರ ಮಾಡಲಾಗಿದೆ ಎಂದು ಯುವತಿಯ ಪೋಷಕರು ದೂರಿದ್ದಾರೆ. 

ಯುವತಿಗೆ ಮದುವೆ ಆಸೆ ತೋರಿಸಿ ಇಸ್ಲಾಂಗೆ ಮತಾಂತರ: ಯುವಕನ ಬಂಧನ

ಬೆಂಗಳೂರು: ಮತಾಂತರ ನಿಷೇಧ ಕಾಯ್ದೆ ಜಾರಿಯಾದ ನಂತರ ಸಿಲಿಕಾನ್ ಸಿಟಿಯಲ್ಲಿ ಮೊದಲ ಪ್ರಕರಣ  ದಾಖಲಾಗಿದೆ. ಮದುವೆಯಾಗುವ ಭರವಸೆ ನೀಡಿ 18 ವರ್ಷದ ಉತ್ತರ ಪ್ರದೇಶದ ಯುವತಿಯನ್ನು ಮತಾಂತರ ಮಾಡಲಾಗಿದ್ದು, ಸೈಯದ್ ಮುಯೀನ್ ಎಂಬಾತನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ‌. 

ಯುವತಿಯ ಕುಟುಂಬದವರು ಮೂಲತಃ ಉತ್ತರ ಪ್ರದೇಶದ ಗೋರಖ್​ಪುರ ಮೂಲದವರು. ಯುವತಿಯ ತಂದೆ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಇಬ್ಬರು ಸಹೋದರಿಯರು ಓರ್ವ ಸಹೋದರನೊಂದಿಗೆ ಯುವತಿ ಯಶವಂತಪುರ ವ್ಯಾಪ್ತಿಯ ಬಿ.ಕೆ.ನಗರದಲ್ಲಿ ಕಳೆದ 15 ವರ್ಷಗಳಿಂದ ವಾಸವಿದ್ದಳು. ಮಗಳು ಅನ್ಯ ಧರ್ಮದ ಯುವಕನನ್ನು ಪ್ರೀತಿಸುತ್ತಿದ್ದಾಳೆ  ಎಂಬ ಶಂಕೆ ಮೇಲೆ ಆರು ತಿಂಗಳ ಹಿಂದೆ ಮಗಳಿಗೆ ಪೋಷಕರು ಬುದ್ಧಿ ಹೇಳಿದ್ದರು.

ಇದನ್ನೂ ಓದಿ- ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಂದ ಇಂದು ಮಹಾಕುಂಭ ಮೇಳ ಉದ್ಘಾಟನೆ

ಕಳೆದ ಅ. 5ರಂದು‌ ಅಂಗಡಿಗೆ ಹೋಗಿ‌ಬರುವುದಾಗಿ ಹೋಗಿದ್ದ ಯುವತಿ ಮನೆಗೆ ವಾಪಸ್ ಬಂದಿರಲಿಲ್ಲ. ಈ ಹಿನ್ನೆಲೆ ಯಶವಂತಪುರ ಠಾಣೆಯಲ್ಲಿ  ಯುವತಿ ಕುಟುಂಬಸ್ಥರು ನಾಪತ್ತೆ ಪ್ರಕರಣ ದಾಖಲಿದ್ದರು. ಆದರೆ ವಾರದ ಬಳಿಕ ಬುರ್ಖಾ ಧರಿಸಿಕೊಂಡು ಯುವತಿ ಠಾಣೆಗೆ ಆಗಮಿಸಿದ್ದಳು. ಆದರೆ ಆದಾಗಲೇ ಯುವತಿ ಮತಾಂತರಗೊಂಡಿದ್ದು, ಆಕೆಯನ್ನು ಮದುವೆಯಾಗುವುದಾಗಿ‌ ಮುಯೀನ್ ಎಂಬಾತ ಪೊಲೀಸ್ ಠಾಣೆಗೆ ಕರೆತಂದಿದ್ದ. ಮಗಳ ನಡೆ ಕಂಡು ಗಾಬರಿಗೊಂಡ ಪೋಷಕರು ಮುಯೀನ್ ವಿರುದ್ಧ ಮದುವೆಯ ಭರವಸೆ ಕೊಟ್ಟು ಮತಾಂತರ ಮಾಡಿದ್ದಾನೆ ಎಂದು ಆರೋಪಿಸಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ  ಮತ್ತೊಂದು ದೂರು ದಾಖಲಿಸಿದ್ದಾರೆ‌.

ಆರೋಪಿ ಮುಯೀನ್ ಮತ್ತು ಯುವತಿ ಪ್ರೀತಿಸುತ್ತಿದ್ದರು. ಮದುವೆಯಾಗಬೇಕಾದರೆ ಮತಾಂತರವಾಗಬೇಕು ಎಂದು ಮುಯೀನ್ ಯುವತಿಯ ಮೇಲೆ ಒತ್ತಡ ಹೇರಿದ್ದನಂತೆ. ಮುಯೀನ್ ಮಾತು ನಂಬಿ ಆತನ ಜೊತೆ ಹೋಗಿದ್ದ ಯುವತಿಯನ್ನು ಕಾನೂನು ಬಾಹಿರವಾಗಿ ಮಸೀದಿಯೊಂದರಲ್ಲಿ ಮತಾಂತರ ಮಾಡಲಾಗಿದೆ ಎಂದು ಯುವತಿಯ ಪೋಷಕರು ದೂರಿದ್ದಾರೆ. ಸದ್ಯ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮತಾಂತರ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ- "ಹಿಜಾಬ್ ಪ್ರಕರಣ ವಿಚಾರದಲ್ಲಿ ಸುಪ್ರೀಂಕೋರ್ಟ್ ನ ಅಂತಿಮ ತೀರ್ಪು ಬಹಳ ಮುಖ್ಯ"

ಮತಾಂತರ ನಿಷೇಧ ಕಾಯ್ದೆಯ ಅನ್ವಯ ಮತಾಂತರ ಪ್ರಕ್ರಿಯೆಗೆ ಹಲವು ನಿಯಮಗಳನ್ನು ವಿಧಿಸಲಾಗಿದೆ. ಮತಾಂತರವಾಗುವ ವ್ಯಕ್ತಿ ಮೊದಲು ಡಿಸಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಬಳಿಕ ಡಿಸಿ ಆ ವ್ಯಕ್ತಿಯ ಪೋಷಕರು ಹಾಗೂ ಆಪ್ತರ ಅಭಿಪ್ರಾಯ ಪಡೆದು 30 ದಿನಗಳ ಗಡುವು ನೀಡುತ್ತಾರೆ. ಯಾವುದೇ ಒತ್ತಡವಿಲ್ಲದೆ ತಮ್ಮಿಷ್ಟದಂತೆ  ಮತಾಂತರವಾಗುತ್ತಿದ್ದರೆ ಜಿಲ್ಲಾಧಿಕಾರಿ ಅನುಮತಿ ನೀಡುತ್ತಾರೆ. ಯಾವುದೇ ಒತ್ತಡ ಅಥವಾ ಆಮಿಷಕ್ಕೆ ಬಲಿಯಾಗಿ ಮತಾಂತರವಾದರೆ ಮತಾಂತರವಾಗಲು ಸಹಾಯ ಮಾಡುವ ಎಲ್ಲರ ಮೇಲೆ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈಗ ಇದೇ ಕಾಯ್ದೆಯಂತೆ ಮುಯೀನ್ ಹಾಗೂ ಆತನಿಗೆ ಸಹಾಯ‌ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಸದ್ಯ ಮುಯೀನ್ ಬಂಧಿಸಲಾಗಿದೆ. ಇನ್ನು ಮಂತಾತರಕ್ಕೆ ಬೆಂಬಲ ನೀಡಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More