Home> Karnataka
Advertisement

ಸಂತೋಷ್ ಆತ್ಮಹತ್ಯೆ ಪ್ರಕರಣ 40% ಕಾಂಗ್ರೆಸ್ ಟೂಲ್ ಕಿಟ್‍ನ ಭಾಗ: ಬಿಜೆಪಿ

ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ನ್ಯಾಯ ಸಿಗಲೇಬೇಕು. ನ್ಯಾಯದ ಜೊತೆಗೆ ಸಾವಿನ ಹಿಂದಿರುವ ರಹಸ್ಯಗಳಿಗೂ ಉತ್ತರ ಸಿಗಬೇಕು ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಸಂತೋಷ್ ಆತ್ಮಹತ್ಯೆ ಪ್ರಕರಣ 40% ಕಾಂಗ್ರೆಸ್ ಟೂಲ್ ಕಿಟ್‍ನ ಭಾಗ: ಬಿಜೆಪಿ

ಬೆಂಗಳೂರು: ಬೆಳಗಾವಿಯ ಗುತ್ತಿಗೆದಾರ ಸಂತೋಷ್‌ ಪಾಟೀಲ್ ಆತ್ಮಹತ್ಯೆ ಪ್ರಕರಣ #40PercentCONgressToolkit ಭಾಗ ಎಂಬುದಕ್ಕೆ ಹಲವಾರು ದೃಷ್ಟಾಂತಗಳಿವೆ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದೆ.

‘ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ನ್ಯಾಯ ಸಿಗಲೇಬೇಕು. ನ್ಯಾಯದ ಜೊತೆಗೆ ಸಾವಿನ ಹಿಂದಿರುವ ರಹಸ್ಯಗಳಿಗೂ ಉತ್ತರ ಸಿಗಬೇಕು. ಮೃತ ಸಂತೋಷ್‌ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಇದೇ ವಿಷಯವಾಗಿ ಪತ್ರಿಕಾಗೋಷ್ಠಿ ನಡೆಸಿದ್ದರು. ಇದು ಕಾಕತಾಳಿಯವಾಗಲು ಹೇಗೆ ಸಾಧ್ಯ?’ವೆಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: 40% ಕಮಿಷನ್ ನಲ್ಲಿ ಸಿಎಂ ಬೊಮ್ಮಾಯಿ ಪಾಲುದಾರರಾ?- ಬಿ ಕೆ ಹರಿಪ್ರಸಾದ್ ವಾಗ್ದಾಳಿ

‘ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಾಕಷ್ಟು ಅನುಮಾನ ಸೃಷ್ಟಿಸಿದೆ. ಇದು ಕಾಂಗ್ರೆಸ್ ಪಕ್ಷದ "ಬೇನಾಮಿ ಅಧ್ಯಕ್ಷೆ" ಹಾಗೂ "ಮಹಾನಾಯಕ" ಸೃಷ್ಟಿಸಿದ "ಮಹಾಕೈವಾಡವೇ"? ಅಘೋಷಿತ ಕೆಪಿಸಿಸಿ ಅಧ್ಯಕ್ಷೆಯ ಕ್ಷೇತ್ರದಲ್ಲಿ ನಡೆದ ಬೇನಾಮಿ‌ ಕಾಮಗಾರಿಗೆ ಕಾಂಗ್ರೆಸ್ ಮಾಜಿ ಕಾರ್ಯಕರ್ತ ಬಲಿಯಾದರೆ? 40% ಕಮಿಷನ್ ಆರೋಪ ಕಾಂಗ್ರೆಸ್ ಸೃಷ್ಟಿಸಿದ ಬಹುದೊಡ್ಡ ಟೂಲ್ ಕಿಟ್. ಈ ಷಡ್ಯಂತ್ರವನ್ನು ಪೋಷಿಸುವುದಕ್ಕಾಗಿ ಕಾಂಗ್ರೆಸ್ ಖಳನಾಯಕರು ಮಗದೊಂದು ಪ್ರಹಸನ ಹೆಣೆದರೇ? ಸಾವಿನ ರಾಜಕಾರಣಕ್ಕೆ ಕಾಂಗ್ರೆಸ್ ಮುನ್ನುಡಿ ಬರೆಯುತ್ತಿದೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಅನುಮೋದನೆ ಇಲ್ಲದೆಯೇ ನೂರಕ್ಕೂ ಹೆಚ್ಚು ಕಾಮಗಾರಿ ನಡೆಸಿದ್ದ ಸಂತೋಷ್. ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಕಾಮಗಾರಿಯಲ್ಲವೆಂದು ಗ್ರಾಮೀಣಾಭಿವೃದ್ಧಿ ಅಧಿಕಾರಿಗಳಿಂದ ಸ್ಪಷ್ಟನೆ. ಅನಧಿಕೃತ ಕಾಮಗಾರಿಯ ಹಿಂದೆ ಕೆಪಿಸಿಸಿಯ "ಅಘೋಷಿತ ಅಧ್ಯಕ್ಷೆಯ" ಪಾತ್ರವೇನು? ಕೇಂದ್ರದ ನಾಯಕರ, ಮಂತ್ರಿಗಳ, ಅಧಿಕಾರಿಗಳ ಬಳಿಗೆ ತೆರಳಿ ದೂರು ಸಲ್ಲಿಸುವಷ್ಟು ಧೈರ್ಯವಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಮೆತ್ತಗಿನ ಮನುಷ್ಯನೇ? ಇದರ ಹಿಂದೆ #40PercentCONgressToolkit ಕೈವಾಡವಿದೆ. ಅರಾಜಕತೆ ಸೃಷ್ಟಿಸಲು ಮುಗ್ದರನ್ನು ಕಾಂಗ್ರೆಸ್‌ ನಾಯಕರು ಬಳಸಿಕೊಳ್ಳುತ್ತಿದ್ದಾರೆಯೇ?’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: KS Eshwarappa: ಸಚಿವ ಈಶ್ವರಪ್ಪರನ್ನು ವಜಾಗೊಳಿಸಿ, ಬಂಧಿಸುವಂತೆ ರಾಜ್ಯಪಾಲರಿಗೆ ಕಾಂಗ್ರೆಸ್ ಮನವಿ

‘ಸಂತೋಷ್‌ ಪ್ರಕರಣ #40PercentCONgressToolkit ಭಾಗ ಎಂಬುದಕ್ಕೆ ಹಲವಾರು ದೃಷ್ಟಾಂತಗಳಿವೆ. ಸಂತೋಷ್ ಪಾಟೀಲ್ ಮೂಲತಃ ಕಾಂಗ್ರೆಸ್ ಕಾರ್ಯಕರ್ತ, ಸಂತೋಷನಿಂದ ರಾಹುಲ್ ಗಾಂಧಿ ಸಹಿ ನಕಲು, 40% ಕಮಿಷನ್ ಕಾಂಗ್ರೆಸ್ ಸೃಷ್ಟಿ, ಸಂತೋಷ್ ಪಾಟೀಲನಿಂದಲೂ 40% ಕಮಿಷನ್ ಪ್ರಸ್ತಾಪ, ಕಾರ್ಯಾದೇಶ ಇಲ್ಲದೇ ಕಾಮಗಾರಿ, ಕೆಪಿಸಿಸಿ "ಅಘೋಷಿತ ಅಧ್ಯಕ್ಷೆಯ" ಕ್ಷೇತ್ರದಲ್ಲಿ ಕಾಮಗಾರಿ ಮತ್ತು ಈಗ ಮೃತನ ಪರ ಬ್ಯಾಟಿಂಗ್. ಮೃತ ವ್ಯಕ್ತಿಯ ಎಲ್ಲಾ ವಿಚಾರಗಳು "ಮಹಾನಾಯಕ" ಮತ್ತು "ಬೇನಾಮಿ ಅಧ್ಯಕ್ಷೆಯ" ಸುತ್ತ ಸುತ್ತುತ್ತಿರುವುದು ನಿಜವಲ್ಲವೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More