Home> Karnataka
Advertisement

Bangalore Population: ‘10 ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ ದುಪ್ಪಟ್ಟು’

ನಮ್ಮ ನಗರಗಳಲ್ಲಿ ತ್ಯಾಜ್ಯ, ಮಾಲಿನ್ಯ, ಧೂಳು, ಇಂಗಾಲದ ಕಾರುವಿಕೆ ಎಲ್ಲವೂ ಅಂಕೆ ಮೀರಿವೆ. ಇವುಗಳನ್ನು ಬಗೆಹರಿಸಲು ಎಷ್ಟೇ ಪ್ರಯತ್ನಪಟ್ಟರೂ ಯಶಸ್ವಿಯಾಗಿಲ್ಲವೆಂದು ಬಿಬಿಎಂಪಿ ವಿಶೇಷ ಆಯುಕ್ತ ಡಾ.ತ್ರಿಲೋಕಚಂದ್ರ ಹೇಳಿದ್ದಾರೆ.  

Bangalore Population: ‘10 ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ ದುಪ್ಪಟ್ಟು’

ಬೆಂಗಳೂರು: ಸದ್ಯ 1.30 ಕೋಟಿ ಇರುವ ಸಿಲಿಕಾನ್ ಸಿಟಿ ಬೆಂಗಳೂರಿನ ಜನಸಂಖ್ಯೆಯು ಮುಂದಿನ 10 ವರ್ಷಗಳಲ್ಲಿ 2.50 ಕೋಟಿ ತಲುಪಲಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಾ.ತ್ರಿಲೋಕಚಂದ್ರ ಹೇಳಿದ್ದಾರೆ.

ಬೆಂಗಳೂರು ತಂತ್ರಜ್ಞಾನ ಸಮಾವೇಶದ 2ನೇ ದಿನವಾದ ಗುರುವಾರ ‘ಒನ್‌ ಹೆಲ್ತ್ ಮತ್ತು ಸಾಂಕ್ರಾಮಿಕಗಳ ತಡೆ’ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅವೈಜ್ಞಾನಿಕ ನಗರೀಕರಣ ಮತ್ತು ಅತಿಕ್ರಮಣಗಳಿಂದಾಗಿ ನಮ್ಮ ಮುಂದೆ ಆರೋಗ್ಯಕ್ಕೆ ಸಂಬಂಧಿಸಿದ ಸವಾಲುಗಳು ಬೃಹದಾಕಾರವಾಗಿವೆ. ಇವುಗಳನ್ನು ಬಗೆಹರಿಸಲು ನಿರಂತರ ನಿಗಾ ವ್ಯವಸ್ಥೆ ಇರಬೇಕಾದ ಜರೂರಿದೆ’ ಎಂದು ತಿಳಿಸಿದರು.  

ಜನರು ಬೇರೆಬೇರೆ ಕಾರಣಗಳಿಂದ ನಗರಗಳತ್ತ ವಲಸೆ ಬರುತ್ತಲೇ ಇದ್ದಾರೆ. ಆದರೆ, ನಮ್ಮ ನಗರಗಳ ಧಾರಣಾಶಕ್ತಿ ಬರಿದಾಗಿದೆ. ಬೆಂಗಳೂರಿನಂತಹ ಬೃಹತ್‌ ನಗರಗಳಲ್ಲಿ ಜನರ ಆರೊಗ್ಯವನ್ನು ಕಾಪಾಡಬೇಕೆಂದರೆ ಸರಿಯಾದ ನೀತಿ ಮತ್ತು ಆಡಳಿತಗಳು ಪ್ರಮುಖವಾಗಿವೆ ಎಂದು ಅವರು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ: ಸಿಎಂ ಬೊಮ್ಮಾಯಿ ಬಂಧನಕ್ಕೆ ಸಿದ್ದರಾಮಯ್ಯ ಆಗ್ರಹ

ಆರೋಗ್ಯ ಎಂದರೆ ಕೇವಲ ಮನುಷ್ಯ ಕೇಂದ್ರಿತವಲ್ಲ. ನಾವು ಇದರಲ್ಲಿ ಪರಿಸರ, ಪ್ರಾಣಿ ಮತ್ತು ಅರಣ್ಯಗಳನ್ನು ಕೂಡ ಒಳಗೊಳ್ಳಬೇಕು. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಡೆಂಗ್ಯೂ, ಚಿಕೂನ್ ಗುನ್ಯಾ ಸೇರಿದಂತೆ ಹಲವು ಪ್ರಾಣಿಜನ್ಯ ರೋಗಗಳನ್ನು ಎದುರಿಸುತ್ತಿದ್ದೇವೆ. ಒಟ್ಟಾರೆ ಹೀಗೆ ಪ್ರಾಣಿಗಳಿಂದ ಹಬ್ಬುವ ರೋಗಗಳ ಪ್ರಮಾಣ ಶೇ.75ರಷ್ಟಿದ್ದು, ಇದು ಕಳವಳಕಾರಿಯಾಗಿದೆ ಎಂದು ತಿಳಿಸಿದರು.  

ನಮ್ಮ ನಗರಗಳಲ್ಲಿ ತ್ಯಾಜ್ಯ, ಮಾಲಿನ್ಯ, ಧೂಳು, ಇಂಗಾಲದ ಕಾರುವಿಕೆ ಎಲ್ಲವೂ ಅಂಕೆ ಮೀರಿವೆ. ಇವುಗಳನ್ನು ಬಗೆಹರಿಸಲು ಎಷ್ಟೇ ಪ್ರಯತ್ನಪಟ್ಟರೂ ಅವು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಇವು ಬಗೆಹರಿಯಬೇಕೆಂದರೆ ವಾರ್ಡ್ ಮತ್ತು ಸಮುದಾಯಗಳ ಮಟ್ಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲದೆ ಹೋದರೆ ನಾವು ದುಷ್ಪರಿಣಾಮಗಳಿಗೆ ಒಳಗಾಗಬೇಕಾಗುತ್ತದೆ ಎಂದು ಅವರು ನುಡಿದರು.

ಇದನ್ನೂ ಓದಿ: ಸೈಟ್‍ ಕೊಡದ ಬಿಲ್ಟರರಿಂದ ಪರಿಹಾರ ಕೊಡಲು ಗ್ರಾಹಕರ ಆಯೋಗದ ಆದೇಶ

ಇದೇ ಗೋಷ್ಠಿಯಲ್ಲಿ ಮಾತನಾಡಿದ ಡಾ.ಫರಾ ಇಷ್ತಿಯಾಕ್‌, ‘ನಮ್ಮಲ್ಲಿರುವ ನಗರೀಕರಣದ ಸ್ವರೂಪವೇ ಹಲವು ಸಮಸ್ಯೆಗಳ ಮೂಲವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಆಧಾರದ ಮೇಲೆ ನಗರೀಕರಣದ ಸ್ವರೂಪವನ್ನೇ ಆಮೂಲಾಗ್ರವಾಗಿ ಬದಲಿಸಿಕೊಳ್ಳಬೇಕಾದ ತುರ್ತು ನಮ್ಮ ಎದುರಿಗಿದೆ. ಮುಖ್ಯವಾಗಿ ಎಲ್ಲ ನಗರಗಳಲ್ಲೂ ಕೆರೆಕಟ್ಟೆ ಮತ್ತು ಇನ್ನಿತರ ನೀರಿನ ಮೂಲಗಳನ್ನು ಸುಸ್ಥಿತಿಯಲ್ಲಿ ಸಂರಕ್ಷಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ಗೋಷ್ಠಿಯಲ್ಲಿ ಡಾ.ಪರಮೇಶ್‌, ಡಾ.ವರ್ಷಾ ಶ್ರೀಧರ್‍‌ ಮತ್ತು ಡಾ.ಸಿಂಧೂರ ಗಣಪತಿ ಕೂಡ ತಮ್ಮ ವಿಚಾರಗಳನ್ನು ಮಂಡಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More