Home> Karnataka Assembly Election
Advertisement

Karnataka Assembly Election 2023 Live Updates: ಜೀ ಕನ್ನಡ ನ್ಯೂಸ್‌ ಚುನಾವಣಾ ಪೂರ್ವ ಫಲಿತಾಂಶ

Karnataka Assembly Election 2023 Live News Updates: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ರಾಜಕೀಯ ಅಖಾಡ ರಂಗು ಪಡೆದಿದೆ. ಮೇ10 ರಂದು ಮತದಾನ ನಡೆಯಲಿದ್ದು, 13 ರಂದು ಮತ ಎಣಿಕೆ ನಡೆಯಲಿದೆ. ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಭರ್ಜರಿ ಮತಬೇಟೆ ನಡೆಸಿದ್ದಾರೆ. ಚುನಾವಣಾ ಅಖಾಡದ ಕ್ಷಣ ಕ್ಷಣದ ಮಾಹಿತಿ ಜೀ ಕನ್ನಡ ನ್ಯೂಸ್‌ ವೆಬ್‌ಸೈಟ್‌ನಲ್ಲಿ....
 

Karnataka Assembly Election 2023 Live Updates: ಜೀ ಕನ್ನಡ ನ್ಯೂಸ್‌ ಚುನಾವಣಾ ಪೂರ್ವ ಫಲಿತಾಂಶ
LIVE Blog

Karnataka Assembly Election 2023 Live News Updates: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಮೂರೇ ಮೂರು ದಿನ ಬಾಕಿ. ಮೇ10 ರಂದು ಮತದಾನ ನಡೆಯಲಿದ್ದು, 13 ರಂದು ಫಲಿತಾಂಶ ಹೊರಬೀಳಲಿದೆ. ನಾಳೆಯಿಂದ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ. ರಾಜ್ಯದಲ್ಲಿ ಪ್ರಬಲ ಮೂರು ಪಕ್ಷಗಳು ಭರ್ಜರಿ ಮತಬೇಟೆಯಾಡುತ್ತಿದ್ದಾರೆ. ಈ ಬಾರಿ ಹೇಗಾದರೂ ಮಾಡಿ ಗೆಲ್ಲಲೇಬೇಕೆಂದು ಮೂರು ಪಕ್ಷಗಳು ಪಣತಟ್ಟಿವೆ. ಶತಾಗತಾಯ ಸರ್ಕಾರ ರಚಿಸಲು ಕಾಂಗ್ರೆಸ್‌ ರಣತಂತ್ರಗಳನ್ನು ಹೆಣೆದು, ಸರ್ಕಾರದ ವಿರುದ್ಧ ಅನೇಕ ಬ್ರಹ್ಮಾಸ್ತ್ರಗಳನ್ನು ಬಿಡುತ್ತದೆ. ಇತ್ತ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಬಿಜೆಪಿ ತನ್ನ ಕೆಲಸದ ಜೊತೆ ಮೋದಿ ಫೇಮ್‌ ಇಟ್ಟುಕೊಂಡು ಮತದಾರರ ಮುಂದೆ ಬರುತ್ತಿದೆ. ಉಭಯ ಪಕ್ಷಗಳು ಭರ್ಜರಿ ಪ್ರಚಾರ ಕೈಗೊಂಡಿವೆ. 

ಇಂದು ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ಎರಡನೇ ಹಂತದ ರೋಡ್ ಶೋ ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ಬೃಹತ್‌ ರೋಡ್‌ ಶೋ ನಡೆಯಲಿದೆ. ನ್ಯೂ ತಿಪ್ಪಸಂದ್ರ ರಸ್ತೆಯಿಂದ ಟ್ರಿನಿಟಿ ಸರ್ಕಲ್ ವರೆಗೆ 6.5 ಕಿ.ಮೀ ಉದ್ದದ ರೋಡ್ ಶೋ ಬೆಳಿಗ್ಗೆ 10 ಗಂಟೆಗೆ ಶುರುವಾಗಲಿದೆ. ನ್ಯೂ ತಿಪ್ಪಸಂದ್ರ ರಸ್ತೆಯ ಕೆಂಪೇಗೌಡ ಪ್ರತಿಮೆಗೆ ನಮನ ಸಲ್ಲಿಸಿದ ಬಳಿಕ ರೋಡ್ ಶೋ ಆರಂಭವಾಗಲಿದೆ. ಬಳಿಕ ಹೆಚ್​ಎಎಲ್ 2ನೇ ಹಂತ, 80 ಅಡಿ ರಸ್ತೆಯ ಜಂಕ್ಷನ್, ಹೆಚ್​ಎಎಲ್ 2ನೇ ಹಂತ, 12ನೇ ಮುಖ್ಯರಸ್ತೆ ಜಂಕ್ಷನ್, ಓಲ್ಡ್ ಮದ್ರಾಸ್ ರಸ್ತೆ ಮಾರ್ಗವಾಗಿ ಟ್ರಿನಿಟಿ ಸರ್ಕಲ್ ತಲುಪಲಿದೆ. ಬೆಳಿಗ್ಗೆ 10 ರಿಂದ 11:30ರವರೆಗೆ ರೋಡ್ ಶೋ ಜರುಗಲಿದೆ. 

ಪ್ರಧಾನಿ ಮೋದಿ ರೋಡ್ ಶೋ ನಡುವೆಯೇ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಇಂದು ಇಡೀ ದಿನ ಬೆಂಗಳೂರಿನ ಹಲವು ಕ್ಷೇತ್ರಗಳಲ್ಲಿ ರಾಹುಲ್, ಪ್ರಿಯಾಂಕಾ ಕ್ಯಾಂಪೇನ್ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಮಧ್ಯಾಹ್ನ ಮೂಡಬಿದರೆಯಲ್ಲಿ ಪ್ರಚಾರ ಮುಗಿಸಿ ಮಹಾದೇವಪುರ ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿ ಆಗಮಿಸಲಿದ್ದಾರೆ. ಪುಲಕೇಶಿನಗರ ಹಾಗೂ ಶಿವಾಜಿನಗರದಲ್ಲಿಯೂ ರಾಹುಲ್‌, ಪ್ರಿಯಾಂಕಾ ಮತಬೇಟೆಯಾಡಲಿದ್ದಾರೆ. 

07 May 2023
20:45 PM

ಬಹುನಿರೀಕ್ಷಿತ ಜೀ ಕನ್ನಡ ನ್ಯೂಸ್‌ನ ಚುನಾವಣಾ ಪೂರ್ವ 3ನೇ ಸಮೀಕ್ಷೆಯು ಈಗ ಪ್ರಕಟವಾಗಿದೆ. 224 ವಿಧಾನಸಭಾ ಕ್ಷೇತಗಳ ಪೈಕಿ ಬಿಜೆಪಿ 103-118 ಮತ್ತು ಕಾಂಗ್ರೆಸ್‌ 82-97 ಹಾಗೂ ಜೆಡಿಎಸ್‌ 28-33 ಸೇರಿದಂತೆ ಇತರೆ ಪಕ್ಷಗಳು 1-4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಅಲ್ಲದೆ, 100% ಮತಗಳಲ್ಲಿ ಬಿಜೆಪಿ 42%, 41% ಕಾಂಗ್ರೆಸ್‌, 14% ಜೆಡಿಎಸ್‌, ಇತರೆ ಪಕ್ಷಗಳು 3% ಮತಗಳನ್ನು ಪಡೆಯಲಿವೆ.

 

 

 

20:38 PM

ಜೀ ಕನ್ನಡ ನ್ಯೂಸ್ 3ನೇ ಓಪಿನಿಯನ್‌ ಪೋಲ್‌ ಫಲಿತಾಂಶ ಈಗ ಪ್ರಕಟವಾಗಿದೆ. ರಾಜ್ಯದ ಜನರಿಗೆ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಪ್ರಚಾರ ಕಾಂಗ್ರೆಸ್‌ಗೆ ಎಷ್ಟರ ಮಟ್ಟಿಗೆ ಲಾಭ ತಂದು ಕೊಡಬಹುದು..? ಎಂದು ಪ್ರಶ್ನೆ ಮಾಡಲಾಗಿತ್ತು. ಅತಿಹೆಚ್ಚು ಲಾಭ ಅಂತ 28% ಪ್ರತಿಶತ ಜನ ಹೇಳಿದ್ರೆ, ಒಂದು ಹಂತಕ್ಕೆ ಲಾಭ 34% ಮತ್ತು 38% ಅಂತಹ ವ್ಯತ್ಯಾಸವಾಗದು ಅಂತ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ..

 

 

20:00 PM

ಜೀ ಕನ್ನಡ ನ್ಯೂಸ್ ನ ಚುನಾವಣಾ ಪೂರ್ವ ಮೂರನೇ ಸಮೀಕ್ಷೆಯು ಈಗ ಪ್ರಕಟವಾಗಿದೆ.ಈ ಸಮೀಕ್ಷೆಯಲ್ಲಿ ಜನರಿಗೆ ಯಾವ ಪಕ್ಷ ಅಧಿಕಾರದಲ್ಲಿದ್ದಾಗ ಅತಿ ಹೆಚ್ಚಿನ ಪ್ರಗತಿಯಾಗಿದೆ ಎನ್ನುವ ಪ್ರಶ್ನೆಯನ್ನು ಜನರ ಮುಂದಿಟ್ಟಾಗ ಶೇ 31 ರಷ್ಟು ಜನರು ಕಾಂಗ್ರೆಸ್ ಎಂದು ಹೇಳಿದರೆ, ಶೇ 36ರಷ್ಟು ಜನರು ಬಿಜೆಪಿ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದಾರೆ.ಇನ್ನೂ ಜೆಡಿಎಸ್ ಶೇ 11 ರಷ್ಟು ಎಂದು ಹೇಳಿದ್ದಾರೆ. ಶೇ 22 ರಷ್ಟು ಜನರ ಅಂತಹ ಯಾವುದೇ ವ್ಯತ್ಯಾಸವಿಲ್ಲ ಮೂರು ಪಕ್ಷಗಳು ಒಂದೇ ಎಂದು ಹೇಳಿದ್ದಾರೆ.

19:33 PM

ತನ್ನ ಬಗ್ಗೆಯೇ ಗ್ಯಾರಂಟಿ ಇಲ್ಲದ ರಾಹುಲ್‌ ಗಾಂಧಿ ಕರ್ನಾಟಕಕ್ಕೆ ಬಂದು ಸುಳ್ಳು ಗ್ಯಾರಂಟಿಗಳನ್ನು ನೀಡುತ್ತಿದ್ದಾರೆ. ಸೋನಿಯಾ ಗಾಂಧಿಯೇ ಸ್ವತಃ ತನ್ನ ಮಗನ ಭವಿಷ್ಯ ನಿರ್ಮಿಸುವುದಕ್ಕೆ 20 ವರ್ಷಗಳಿಂದ ಕಷ್ಟಪಡುತ್ತಿರುವಾಗ ಇವರು ರಾಜ್ಯದ ಜನರಿಗೆ ಏನು ಗ್ಯಾರಂಟಿ ಕೊಡುತ್ತಾರೆ ? ಎಂದು ಅಸ್ಸಾಂ ಸಿಎಂ ಹಿಮಾಂತ ಬಿಶ್ವ ಶರ್ಮಾ  ಎಂದು ಪ್ರಶ್ನಿಸಿದ್ದಾರೆ.

18:50 PM

ಆನೇಕಲ್ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಅವರ ಮಾತುಗಳು:

ನಿಮ್ಮ ಸರ್ಕಾರವನ್ನು ಕಳ್ಳತನ ಮಾಡಿ ಮೂರು ವರ್ಷಗಳಾಗಿವೆ. ನೀವು ಆರಿಸಿದ್ದು, ಬೇರೆ ಸರ್ಕಾರ, ಆದರೆ ಆಡಳಿತ ಮಾಡಿದ್ದು, ಬೇರೆ ಸರ್ಕಾರ. ಶಾಸಕರನ್ನು ಹಣದಿಂದ ಖರೀದಿ ಮಾಡಿ ಸರ್ಕಾರವನ್ನು ಕದಿಯಲಾಗಿದೆ. ಕಳ್ಳತನದಿಂದ ರಚನೆಯಾದ ಸರ್ಕಾರ ಅದು ಕಳ್ಳತನ ಹೊರ್ತಾಗಿ ಬೇರೇನು ಮಾಡುವುದಿಲ್ಲ. ಅವರಿಗೆ ಬೇರೆ ಏನೂ ಗೊತ್ತಿರುವುದಿಲ್ಲ.

ನಾನು ಕರ್ನಾಟಕದಲ್ಲಿ ಭಾರತ ಜೋಡೋ ಯಾತ್ರೆ ಮೂಲಕ 500ಕ್ಕೂ ಹೆಚ್ಚು ಕಿ.ಮೀ ನಿಮ್ಮ ಜತೆ ಪಾದಯಾತ್ರೆ ಮಾಡಿದ್ದೆ. ಈ ರಾಜ್ಯದ ತಾಯಂದಿರು, ಯುವಕರು, ಕಾರ್ಮಿಕರ ಜತೆ ನಾನು ಹೆಜ್ಜೆ ಹಾಕಿದ್ದೆ. ಭಾರತ ಹಾಗೂ ಭಾರತವನ್ನು ಒಂದುಗೂಡಿಸಲು ಹೆಜ್ಜೆ ಹಾಕಿದ್ದೆ. ಸಮಾಜದಲ್ಲಿ ದ್ವೇಷ, ಹಿಂಸಾಚಾರ ತೊಲಗಿಸಲು ಹೆಜ್ಜೆ ಹಾಕಿದ್ದೆ. ಈ ಸಂದರ್ಭದಲ್ಲಿ ನೀವು ನನಗೆ ನಿರುದ್ಯೋಗ, ಬೆಲೆ ಏರಿಕೆ ವಿಚಾರವಾಗಿ ಹೇಳಿದ್ದಿರಿ. 400 ರೂ. ಇದ್ದ ಸಿಲಿಂಡರ್ 1100 ಆಗಿದೆ. 70 ರೂ. ಇದ್ದ ಪೆಟ್ರೋಲ್ 100 ರೂ. ಆಗಿದೆ. ಡೀಸೆಲ್ 60 ರೂ. ಇತ್ತು 90 ರೂ. ಆಗಿದೆ. ನೋಟು ರದ್ಧತಿ ಹಾಗೂ ಜಿಎಸ್ ಟಿ ಸಣ್ಣಪುಟ್ಟ ವ್ಯಾಪಾರಿಗಳನ್ನು ನಾಶ ಮಾಡಿದೆ. ಕರ್ನಾಟಕದಲ್ಲಿ 40% ಕಮಿಷನ್ ಭ್ರಷ್ಟಾಚಾರ ಸರ್ಕಾರ ಎಂದು ನೀವೆಲ್ಲರೂ ಹೇಳಿದ್ದೀರಿ. ಭ್ರಷ್ಟಾಚಾರದಲ್ಲಿ ಈ ಸರ್ಕಾರ ವಿಶ್ವ ದಾಖಲೆ ಮುರಿದಿದೆ. 

ರಾಜ್ಯದಲ್ಲಿ ಭ್ರಷ್ಟಾಚಾರದ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದರು. ಪ್ರಧಾನಮಂತ್ರಿಗಳು ಇದಕ್ಕೆ ಉತ್ತರ ನೀಡಲಿಲ್ಲ. ಎಲ್ಲೇ ನೋಡಿದರೂ ಹಗರಣಗದಳು ನಡೆದಿವೆ. ಪಿಎಸ್ಐ, ಸಹಾಯಕ ಪ್ರಾದ್ಯಾಪಕರು, ಕಿರಿಯ ಇಂಜಿನಿಯರ್ ನೇಮಕಾತಿ ಹಗರಣ, ಸಹಕಾರಿ ಬ್ಯಾಂಕ್ ಹಗರಣ, ಮೈಸೂರ್ ಸ್ಯಾಂಡಲ್ ಹಗರಣದಲ್ಲಿ ಶಾಸಕರ ಪುತ್ರ 8 ಕೋಟಿ ಅಕ್ರಮ ಹಣದ ಜತೆ ಸಿಕ್ಕಿ ಬೀಳುತ್ತಾರೆ. ಆದರೆ ಬಿಜೆಪಿ ಶಆಸಕರು ಹೇಳುತ್ತಾರೆ, ರಾಜ್ಯದಲ್ಲಿ ಸಿಎಂ ಹುದ್ದೆಗೆ 2500 ಕೋಟಿಗೆ ಖರೀದಿ ಮಾಡಬಹುದು ಎನ್ನುತ್ತಾರೆ. ಈ ರಾಜ್ಯದ ಭ್ರಷ್ಟಾಚಾರದ ಬಗ್ಗೆ ಮಕ್ಕಳಿಗೂ ತಿಳಿದಿದೆ. ಕಳೆದ ಮೂರು ವರ್ಷಗಳಿಂದ ಬಿಜೆಪಿ ಸರ್ಕಾರವಿದೆ. ಪ್ರಧಾನಮಂತ್ರಿಗಳಿಗೂ ರಾಜ್ಯದ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಇದೆ. 

ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ದರೋಡೆಯಾಗಿದೆ. ಪ್ರಧಾನಮಂತ್ರಿಗಳೇ 40% ಕಮಿಷನ್ ಲಂಚದಲ್ಲಿ ಯಾವ ಇಂಜಿನ್ ಗೆ ಎಷ್ಟು ಪಾಲು ದೊರೆತಿದೆ? ಪ್ರಧಾನಮಂತ್ರಿಗಳು ಇಲ್ಲಿಗೆ ಬಂದು ಕಾಂಗ್ರೆಸ್ ಪಕ್ಷ 91 ಬಾರಿ ನನ್ನನ್ನು ಟೀಕೆ ಮಾಡಿದ್ದಾರೆ ಎಂದು ಹೇಳುತ್ತಾರೆ. ಆದರೆ ಇದಕ್ಕೂ ಮೊದಲು ರಾಜ್ಯದಲ್ಲಿ ಭ್ರಷ್ಟಾಚಾರ ತಡೆಯಲು ನೀವು ಯಾವ ಕ್ರಮ ಕೈಗೊಂಡಿದ್ದೀರಿ? ಎಷ್ಟು ಜನರನ್ನು ಜೈಲಿಗೆ ಹಾಕಿದ್ದೀರಿ? ನಾನು ಲೋಕಸಭೆಯಲ್ಲಿ ನಿಮಗೆ ಅಧಾನಿ ಅವರ ಜತೆ ನಿಮ್ಮ ಸಂಬಂಧದ ಬಗ್ಗೆ ಪ್ರಶ್ನೆ ಕೇಳಿದ್ದೆ. ನನ್ನನ್ನು ಅನರ್ಹ ಮಾಡಿದರು. ನಾನು ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಲೋಕಸಭೆಯಿಂದ ಹೊರಗೆಹಾಕಿದರು. ರಾಜ್ಯದಲ್ಲಿ ಇಷ್ಟು ಭ್ರಷ್ಟಾಚಾರ ನಡೆಯುತ್ತಿದ್ದರೂ ಏನೂ ಮಾಡುತ್ತಿಲ್ಲ?

ನಾನು ಇಲ್ಲಿಗೆ ಬಂದಾಗ ನಮ್ಮ ನಾಯಕರುಗಳ ಹೆಸರು ಪ್ರಸ್ತಾಪಿಸಿದೆ. ಆದರೆ ಮೋದಿ ಅವರು ತಮ್ಮ ಭಾ,ಣದ ವೇಲೆ ಯಾರೊಬ್ಬರ ಹೆಸರನ್ನು ತೆಗೆದುಕೊಳ್ಳುವುದಿಲ್ಲ. ಮೋದಿ ಅವರ ರೋಡ್ ಶೋಗಳಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರನ್ನು ಹೊರಗೆ ಹಾಕಿದ್ದಾರೆ. ಮೋದಿ ಅವರು ಗಾಡಿಯಲ್ಲಿ ಹೋದರೆ, ಉಳಿದವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾರೆ. ಇದೆಲ್ಲವು ಯಾಕೆ ಆಗುತ್ತಿದೆ ಎಂದು ನನ್ನನ್ನು ನಾನು ಕೇಳಿಕೊಂಡೆ. ಆಗ ನನಗೆ ಎರಡು ಉತ್ತರ ಸಿಕ್ಕಿತು. ಒಂದು ಮೋದಿ ಅವರು ಕೇವಲ ಮೋದಿ ಅವರನ್ನು ನೋಡಿಕೊಳ್ಳಲು ಬಯಸುತ್ತಾರೆ. ಮತ್ತೊಂದು ಅವರು ಅವರ ಹೊರತಾಗಿ ಉಳಿದವರನ್ನು ಕೀಳಾಗಿ ನೋಡುತ್ತಾರೆ. ಇದಕ್ಕಾಗಿ ಅವರು ಮಾತ್ರ ಗಾಡಿಗಳಲ್ಲಿ ಪ್ರಯಾಣ ಮಾಡುತ್ತಾರೆ. ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರು ಭ್ರಷ್ಟರು ಎಂಬ ವಿಚಾರ ತಿಳಿದು ಅವರನ್ನು ನಿಮ್ಮಿಂದ ಮುಚ್ಚಿಡುವ ಪ್ರಯತ್ನ ಮಾಡುತ್ತಿರಬಹುದು.

ರಾಜ್ಯದಲ್ಲಿ ಕಳ್ಳತನ ಆಗಿದ್ದರೆ ಅದರ ಲಾಭ ದೆಹಲಿಗೂ ತಲುಪಿರುತ್ತದೆ. ಇಲ್ಲದಿದ್ದರೆ ಪ್ರಧಾನಮಂತ್ರಿಗಳು ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿಸಿ ಕ್ರಮ ಕೈಗೊಳ್ಳಬೇಕಿತ್ತು. ಕಳೆದ 3 ವರ್ಷಗಳಲ್ಲಿ ಮೋದಿ ಅವರು ಏನು ಮಾಡಿಲ್ಲ. ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಒಂದು ಮಾತನ್ನು ಆಡಿಲ್ಲ. ಮಣಿಪುರದಲ್ಲಿ ದೊಡ್ಡ ಗಲಾಟೆ ನಡೆದು ಜನ ಸಾಯುತ್ತಿದ್ದರಾ. ಆದರೂ ಪ್ರಧಾನಿಗಳು ಹಾಗೂ ಗೃಹಸಚಿವರಿಗೆ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ದ್ವೇಷ ರಾಜಕೀಯದ ಫಲ ಇದಾಗಿದೆ. ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಅದಕ್ಕೆ ದ್ವೇಷ ರಾಜಕಾರಣವೇ ಕಾರಣ. ಈ ರಾಜನೀತಿ ವಿರುದ್ಧವಾಗಿಯೇ ನಾವು ಭಾರತ ಜೋಡೋ ಯಾತ್ರೆ ಮಾಡಿದೆವು. ಇದು ನಮ್ಮ ವಿಚಾರಧಾರೆ. 

ಪ್ರಧಾನಿಗಳು ಕಳೆದ ನಾಲ್ಕು ವರ್ಷಗಳ ಬಗ್ಗೆಯೂ ಮಾತನಾಡುತ್ತಿಲ್ಲ, ಮುಂದಿನ ಐದು ವರ್ಷಗಳ ಬಗ್ಗೆಯೂ ಮಾತನಾಡುತ್ತಿಲ್ಲ. ರಾಜ್ಯದ ಯುವಕರು, ಮಹಿಳೆಯರು, ರೈತರು, ಅಸಂಘಟಿತ ಕಾರ್ಮಿಕರಿಗಾಗಿ ಏನು ಮಾಡುತ್ತೀರಿ ಎಂಬುದನ್ನಾದರೂ ಹೇಳಿ ಪ್ರಧಾನಮಂತ್ರಿಗಳೇ. ಈ ಚುನಾವಣೆ ರಾಜ್ಯದ ಜನರ ಚುನಾವಣೆಯೇ ಹೊರತು, ಮೋದಿ ಅವರ ಚುನಾವಣೆ ಅಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲಿ ಏನು ಮಾಡಲಿದೆ ಎಂಬುದನ್ನು ಹೇಳಲು ಬಯಸುತ್ತೇನೆ.

ಬೆಲೆ ಏರಿಕೆಯಿಂದ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಇದಕ್ಕೆ ಪರಿಹಾರ ನೀಡಲು ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಗೃಹಲಕ್ಷ್ಮಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಅಕ್ಕಿ, ಮನೆ ಯಜಮಾನಿಗೆ 2 ಸಾವಿರ ರೂಪಾಯಿ, ನಿರುದ್ಯೋಗ ಯುವಕರಿಗೆ ನೆರವು, ಪದವೀಧರರಿಗೆ 3 ಸಾವಿರ ರೂಪಾಯಿ, ಡಿಪ್ಲೊಮೊ ಪದವೀಧರರಿಗೆ 1,500 ಯುವನಿಧಿ ಮೂಲಕ 2 ವರ್ಷಗಳ ಕಾಲ ಆರ್ಥಿಕ ನೆರವು ಈ 5 ಗ್ಯಾರಂಟಿಗಳನ್ನು  ನಾವು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೊದಲ ದಿನದ ಮೊದಲ ಸಂಪುಟ ಸಭೆಯಲ್ಲೇ ನಾವು ಅದನ್ನು ಜಾರಿಗೆ ತರಲಿದ್ದೇವೆ.

ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ನಿಮ್ಮ ಬೆಳೆಗಳನ್ನು ಕಸಿಯುವ ಪ್ರಯತ್ನ ಮಾಡಿತ್ತು. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಕಲ್ಯಾಣಕ್ಕೆ 1.50 ಲಕ್ಷ ಕೋಟಿಗಳನ್ನು ನೀಡಲಾಗುವುದು. ಮೋದಿ ಅವರ ಸರ್ಕಾರ ನಿಮ್ಮ ವಿಮಾ ಯೋಜನೆಗಳ ಹಣವನ್ನು ಕಳ್ಳತನ ಮಾಡಿದೆ. ನೀವು ಬೆಳೆ ವಿಮೆ ಮಾಡಿಸಿರುತ್ತೀರಿ. ಆದರೆ ನಿಮ್ಮ ಬೆಳೆ ನಾಶವಾದರೆ ನಿಮಗೆ ವಿಮೆ ಹಣ ಸಿಗುವುದಿಲ್ಲ. ಹೀಗಾಗಿ ಮುಂದಿನ ಕಾಂಗ್ರೆಸ್ ಸರ್ಕಾರ ರೈತರ ಬೆಳೆ ವಿಮೆಗಾಗಿ 5 ಸಾವಿರ ಕೋಟಿ ರೈತರ ಪರಿಹಾರಕ್ಕಾಗಿ ಮೀಸಲಿಡಲಿದೆ. ನಿಮ್ಮ ಜಮೀನಿಗೆ ನಷ್ಟವಾದರೆ ನಿಮಗೆ ಈ ಹಣ ಸಿಗುತ್ತದೆ. ಹಾಲಿನ ಉತ್ಪಾದಕರಿಗೆ ನೀಡುತ್ತಿರುವ 5 ರೂ. ಪ್ರೋತ್ಸಾಹಧನವನ್ನು 7 ರೂ.ಗೆ ಏರಿಕೆ ಮಾಡಲಾಗದುವುದು. 

ಬಿಜೆಪಿ ಅಭ್ಯರ್ಥಿ ಖರ್ಗೆ ಅವರ ಹತ್ಯೆ ಬಗ್ಗೆ ಮಾತನಾಡಿದರೂ ಮೋದಿ ಅವರು ಒಂದೇ ಒಂದು ಮಾತನ್ನೂ ಆಡುತ್ತಿಲ್ಲ. ಆದರೂ ಅವರು ನಮ್ಮ ಬಗ್ಗೆ ಭಯೋತ್ಪಾದನೆ ಕುರಿತು ಮಾತನಾಡುತ್ತಾರೆ. ಕಾಂಗ್ರೆಸ್ ಸರ್ಕಾರದ ಇಬ್ಬರು ಪ್ರಧಾನಮಂತ್ರಿಗಳು ಓರ್ವ ಮುಖ್ಯಮಂತ್ರಿಗಳು ಭಯೋತ್ಪಾದನೆಗೆ ಬಲಿಯಾಗಿದ್ದಾರೆ. ಪ್ರಧಾನಮಂತ್ರಿಗಳೇ ನನ್ನ ಕುಟುಂಬದ ಇಬ್ಬರು ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ನೀವು ನನಗೆ ಭಯೋತ್ಪಾದಕ ವಿಚಾರವಾಗಿ ಪಾಠ ಮಾಡುತ್ತೀರಾ? ನೀವು 24 ತಾಸುಗಳ ಕಾಲ ಭದ್ರತೆ ಮಧ್ಯೆ ಅಡಗಿ ಕೂತಿರುತ್ತೀರಿ. ನೀವು ಜನರ ಮಧ್ಯೆ ಬಂದು ಜನರ ಜತೆ ಓಡಾಡಿ. ನಿಮ್ಮ ನಾಯಕ ನಮ್ಮ ನಾಯಕರ ಹತ್ಯೆ ಬಗ್ಗೆ ಮಾತನಾಡಿದ್ದು, ಈ ಬಗ್ಗೆ ನೀವು ಉತ್ತರ ನೀಡಲೇಬೇಕು. ಖರ್ಗೆ ಅವರ ಬಗ್ಗೆ ಮಾತನಾಡುವಾಗ ಎಛ್ಚರಿಕೆಯಿಂದ ಮಾತನಾಡಿ. 

ಈಗ ನಮ್ಮ ಗ್ಯಾರಂಟಿ ಯೋಜನೆ ಜಾರಿ ಮಾಡಲು ಹಣ ಎಲ್ಲಿಂದ ತರುತ್ತೀರಿ ಎಂದು ನೀವು ಕೇಳಬಹುದು. ಆದರೆ ಒಂದು ಮಾತು ನೆನಪಿರಲಿ, ಬಿಜೆಪಿ ಸರ್ಕಾರ ನಿಮ್ಮಿಂದ 40% ಭ್ರಷ್ಟಾಚಾರದ ಮೂಲಕ ನಿಮ್ಮನ್ನು ಲೂಟಿ ಮಾಡಿದೆ. ಕಾಂಗ್ರೆಸ್ ಪಕ್ಷದ ಸರ್ಕಾರ ಪ್ರಾಮಾಣಿಕ ಸರ್ಕಾರವಾಗಿ ನಿಮ್ಮ ಹಣವನ್ನು ನಿಮಗಾಗಿ ವಿನಿಯೋಗಿಸಲಾಗುವುದು, ಬಿಜೆಪಿಯವರು ಲೂಟಿ ಮಾಡಿರುವ ಅಷ್ಟೂ ಹಣವನ್ನು ಈ ಯೋಜನೆಗಳ ಮೂಲಕ ನಿಮ್ಮ ಜೇಬಿಗೆ ಹಾಕುತ್ತೇವೆ. ನಮ್ಮದು ಶ್ರೀಮಂತರ ಸರ್ಕಾರವಾಗುವುದಿಲ್ಲ, ಬಡವರು, ರೈತರು, ಕಾರ್ಮಿಕರ ಸರ್ಕಾರವಾಗಿ ನಿಮ್ಮ ರಕ್ಷಣೆ ಮಾಡಲಿದೆ. 

ಈ ಸರ್ಕಾರಕ್ಕೆ 40ರ ಸಂಖ್ಯೆ ಬಹಳ ಸೂಕ್ತವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಅವರು ಎಲ್ಲಾ ಹಂತದಲ್ಲೂ 40 ಸಂಖ್ಯೆ ಬಳಸಿದ್ದಾರೆ. ಇದಕ್ಕಾಗಿ ನೀವು ಈ ಚುನಾವಣೆಯಲ್ಲಿ 40 ಸೀಟುಗಳನ್ನು ಮಾತ್ರ ನೀಡಿ. ಕಾಂಗ್ರೆಸ್ ಪಕ್ಷಕ್ಕೆ ನೀವು ಕನಿಷ್ಠ 150 ಸೀಟುಗಳನ್ನು ನೀಡಬೇಕು. ಅದಕ್ಕಿಂತ ಕಡಿಮೆ ಬಹುಮತ ನೀಡಿದರೆ, ಮತ್ತೆ ಶಾಸಕರ ಕಳ್ಳತನ ಮಾಡುವ ಪ್ರಯತ್ನ ಮಾಡುತ್ತಾರೆ. ಈ ಬಾರಿ ಕಾಂಗ್ರೆಸ್ 150 ಕ್ಷೇತ್ರಗಳನ್ನು ಗೆದ್ದೆ ಗೆಲ್ಲುತ್ತದೆ. ನೀವೆಲ್ಲರೂ ಇಲ್ಲಿಗೆ ಬಂದಿರುವುದಕ್ಕೆ ನಿಮಗೆ ಹೃದಯಪೂರ್ವಕ ಧನ್ಯವಾದಗಳು.

18:48 PM

ದಕ್ಷಿಣ ಕನ್ನಡದ ಮೂಡುಬಿದರೆಯಲ್ಲಿ ಪ್ರಿಯಾಂಕಾ ಗಾಂಧಿ ಅವರ ಮಾತುಗಳು:

ಇದು ದೇವರ ಭೂಮಿ, ಧಾರ್ಮಿಕ ನಗರ, ಜೈನ ಧರ್ಮದ ಪವಿತ್ರ ಧರ್ಮ, ಕಟೀಲ್ ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮಶ್ವರಿ ಅವರ ಆಶೀರ್ವಾದ ಈ ಭೂಮಿಯ ಮೇಲಿದೆ. ಇಲ್ಲಿ ಬಹಳ ಪುರಾತನ  ಭೂಮಿಯಿಂದ ದೇಶಕ್ಕೆ ಉತ್ತಮ ಸಂದೇಶ ರವಾನೆಯಾಗಿದೆ. ಎಲ್ಲರ ಜತೆಗೂಡಿ, ಎಲ್ಲರನ್ನೂ ಜತೆಗೂಡಿಸಿಕೊಂಡು ಎಳ್ಲಾ ಧರ್ಮಗಳನ್ನು ಗೌರವಿಸುತ್ತಾ ಮುಂದೆ ತಗೆದುಕೊಂಡು ಹೋಗುವ ಭೂಮಿ ಇದಾಗಿದೆ. 

ಸತ್ಯ ನಮ್ಮ ಹೃದಯದಲ್ಲಿರಲಿ, ಸತ್ಯದ ಭಾವನೆಯಲ್ಲಿ ನಾವು ಸೇವೆ ಮಾಡಬೇಕು. ಸತ್ಯ ಹಾಗೂ ಸೇವೆ ಬಹಳ ದೊಡ್ಡ ವಿಚಾರ. ಇದು ಸಣ್ಣ ಪುಟ್ಟ ವಿಚಾರದಲ್ಲೂ ಅಡಗಿರುತ್ತದೆ. ತಾಯಿ ಮಕ್ಕಳನ್ನು ಆರೈಕೆ ಮಾಡುವಾಗ, ರೈತರು ತಮ್ಮ ಜಮೀನಿನಲ್ಲಿ ಉಳುಮೆ ಮಾಡುವಾಗ ಇದು ವ್ಯಕ್ತವಾಗುತ್ತದೆ. ಇದೂ ಕೂಡ ಒಂದರ್ಥದಲ್ಲಿ ಸೇವೆಯಾಗಿರುತ್ತದೆ. ಈ ಸೇವೆಯನ್ನು ಪರಿಶ್ರಮ ಹಾಗೂ ಹೆಮ್ಮೆಯಿಂದ ಮಾಡಲಾಗುತ್ತದೆ. ಇದು ನಿಮ್ಮ ಸಂಸ್ಕೃತಿ ಹಾಗೂ ಸಭ್ಯತೆ ಕಲಿಸಿರುತ್ತದೆ. 

ನೀವು ಬಹಳ ಪರಿಶ್ರಮ ಹಾಗೂ ಹೆಮ್ಮೆಯಿಂದ ನಿಮ್ಮ ಎಲ್ಲಾ ಕೆಲಸಗಳನ್ನು ಮಾಡುತ್ತೀರಿ. ನಿಮ್ಮ ಕೆಲಸಗಳನ್ನು ನೀವು ಶ್ರದ್ಧೆ ಹಾಗೂ ಪರಿಶ್ರಮದಿಂದ ಮಾಡಿದರೆ ಅದು ದೇಶ ನಿರ್ಮಾಣಕ್ಕೆ ಕೊಡುಗೆಯಾಗುತ್ತದೆ. ದೇಶ ನಿರ್ಮಾಣವಾದರೆ ಅದರ ನಿರ್ಮಾತೃ ನೀವೇ ಆಗಿರುತ್ತೀರಿ. ಇದು ಸರ್ಕಾರದ ಜವಾಬ್ದಾರಿಯೂ ಆಗಿರುತ್ತದೆ. ಹೀಗಾಗಿ ನಾವು ನೀವು ಸರ್ಕಾರದ ಮೇಲೆ ನಿಷ್ಠೆ ಹಾಗೂ ಪ್ರಾಮಾಣಿಕ ಕೆಲವನ್ನು ನಿರೀಕ್ಷೆ ಮಾಡುತ್ತೇವೆ. ಅದೇ ಆಧಾರದ ಮೇಲೆ ನಾವು ಚುನಾವಣೆ ಸಮಯದಲ್ಲಿ ಸರ್ಕಾರವನ್ನು ಚುನಾಯಿಸುತ್ತೇವೆ. 

ಚುನಾವಣೆ ಸಮಯದಲ್ಲಿ ಬೇರೆ ಬೇರೆ ಪಕ್ಷದ ನಾಯಕರು ನಿಮ್ಮ ಮುಂದೆ ಮಾತನಾಡುತ್ತಾರೆ. ಈ ಸಮಯದಲ್ಲಿ ನಾಯಕರುಗಳು ನಿಮ್ಮ ಜೀವನ ಹಾಗೂ ಸಮಸ್ಯೆಗಳ ಬಗ್ಗೆ ಅದಕ್ಕೆ ಪಕ್ಷಗಳು ರೂಪಿಸಿರುವ ಪರಿಹಾರಗಳ ಬಗ್ಗೆ ಮಾತನಾಡುವ ನಿರೀಕ್ಷೆ ಇಟ್ಟುಕೊಂಡಿರುತ್ತೀರಿ. ಎರಡು ದಿನಗಳ ಹಿಂದೆ ಮೋದಿ ಅವರು ಇಲ್ಲಿಗೆ ಆಗಮಿಸಿ ಭಾಷಣ ಮಾಡಿದರು. ಅವರ ಭಾಷಣದಲ್ಲಿ ಅವರು ಭಯೋತ್ಪಾದಕ ಹಾಗೂ ಸುರಕ್ಷತೆ ಬಗ್ಗೆ ಮಾತನಾಡುತ್ತಿದ್ದರು. ಆದರೆ ದು ಈ ರಾಜ್ಯಕ್ಕೆ ಸಂಬಂಧಿಸಿದ ವಿಚಾರವಲ್ಲ. ಪ್ರಧಾನಮಂತ್ರಿಗಳು ತಪ್ಪು ಭಾವಿಸಿ ಇದರ ಬಗ್ಗೆ ಮಾತನಾಡಿರಬಹುದು ಎಂದು ಭಾವಿಸಿದೆ. 

ಮೋದಿ ಅವರು ನಿರುದ್ಯೋಗದ ಬಗ್ಗೆ ಮಾತನಾಡಲಿಲ್ಲ, ಬೆಲೆ ಏರಿಕೆ ಬಗ್ಗೆ ಮಾತನಾಡಲಿಲ್ಲ. ಕಾರಣ ಇವರ ಆಡಳಿತದಲ್ಲೇ ಈ ಸಮಸ್ಯೆಗಳು ಹೆಚ್ಚಾಗಿದ್ದು, ಇವುಗಳಿಗೆ ಪರಿಹಾರ ನೀಡಲು ಅವರ ಸರ್ಕಾರ ವಿಫಲವಾಗಿದೆ. ಅವರ ಆಡಳಿತದಲ್ಲಿ ಅಡುಗೆ ಅನಿಲ, ಬೇಳೆ ಕಾಳುಗಳು, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಖರೀದಿ ಮಾಡುವುದು ಕಷ್ಟವಾಗಿದೆ. ಹೀಗಾಗಿ ಅವರು ಭಯೋತ್ಪಾದನೆ ಹಾಗೂ ಸುರಕ್ಷತೆ ಬಗ್ಗೆ ಮಾತನಾಡುತ್ತಿದ್ದಾರೆ.

ಈ ರಾಜ್ಯದಲ್ಲಿ ಪ್ರತಿನಿತ್ಯ 5 ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಲ್ಲಿ ಜನರಿಗೆ ಭಯವಿರುವುದು ನಿರುದ್ಯೋಗ, ಬೆಲೆ ಏರಿಕೆಯಿಂದಾಗಿ. 6400 ರೈತರು ನಾಲ್ಕು ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡರೆ, 500ಕ್ಕೂ ಹೆಚ್ಚು ಜನ ಬಡತನದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿರುದ್ಯೋಗದಿಂದ 1600 ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಧಾನಮಂತ್ರಿಗಳೇ ಕರ್ನಾಟಕದಲ್ಲಿ ಭಯೋತ್ಪಾದನೆ ಆಗಿದ್ದರೆ ಅದು ನಿಮ್ಮದೇ ಸರ್ಕಾರದ 40% ಕಮಿಷನ್ ನಿಂದಾಗಿ. ಜನರನ್ನು ಲೂಟಿ ಮಾಡುತ್ತಿರುವ ನಿಮ್ಮದೇ ನಾಯಕರಿದ ಜನ ಭಯಗೊಂಡಿದ್ದಾರೆ. ರಾಜ್ಯದಲ್ಲಿ ಆತಂಕವಿದ್ದರೆ ಈ ವಿಚಾರಗಳಿಂದಾಗಿ ಆತಂಕವಿದೆ. ಪ್ರಧಾನಮಂತ್ರಿಗಳೇ ರಾಜ್ಯ ಸರ್ಕಾರದಲ್ಲಿ 2.50 ಲಕ್ಷ ಹುದ್ದೆಗಳು ಖಾಲಿ ಇವೆ. ಅವುಗಳನ್ನು ತುಂಬಲು ನಿಮ್ಮಿಂದ ಸಾಧ್ಯವಾಗದೇ, ರಾಜ್ಯದ ಲಕ್ಷಾಂತರ ಯುವಕರು ಆತಂಕಕ್ಕೆ ಒಳಗಾಗಿದ್ದಾರೆ.

ಈ ರಾಜ್ಯದಲ್ಲಿ ಭ್ರಷ್ಟಾಚಾರ ಹೇಗಿದೆ ಎಂದರೆ ರೈತನ ಬಳಿ ಅಧಿಕಾರಿಗೆ ಲಂಚ ನೀಡಲು ಹಣವಿಲ್ಲ ಎಂದು ಆತ ತನ್ನ ಎತ್ತುಗಳನ್ನು ಲಂಚವಾಗಿ ನೀಡುವ ಪರಿಸ್ಥಿತಿ ಬಂದಿದೆ. ಇದು ನಿಜವಾದ ಭಯೋತ್ಪಾದನೆ. ಬಿಜೆಪಿ ಶಾಸಕನ ಮನೆಯಲ್ಲಿ ಭ್ರಷ್ಟಾಚಾರದ ಹಣ ಸಿಕ್ಕರೂ ಯಾವುದೇ ತನಿಖೆ ಆಗುವುದಿಲ್ಲ. ಬದಲಿಗೆ ಆ ಶಾಸಕ ಮೆರವಣಿಗೆ ಮಾಡುತ್ತಾನೆ. ಈ ಮೆರವಣಿಗೆ ಭ್ರಷ್ಟಾಚಾರ ಎಂಬ ಭಯೋತ್ಪಾದನೆಯ ಮೆರವಣಿಗೆಯಾಗಿದೆ.

ಈ ಭಾಗದ ಜನ ವಿಜಯ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಹಾಗೂ ಕಾರ್ಪೋರೇಷನ್ ಬ್ಯಾಂಕ್ ಕಟ್ಟಿದ್ದರು. ಆದರೆ ಈ ಸರ್ಕಾರಗಳು ಇವುಗಳನ್ನು ವಿಲೀನ ಮಾಡಿ ನಾಶ ಮಾಡಿವೆ. ನೆಹರೂ ಹಾಗೂ ಇಂದಿರಾ ಗಾಂಧಿ ಅವರು ನಿರ್ಮಿಸಿದ ಮಂಗಳೂರು ವಿಮಾನ ನಿಲ್ದಾಣಗಳನ್ನು ಅದಾನಿ ಅವರಿಗೆ ಮಾರಿದ್ದಾರೆ. ಈ ದೇಶದ ಎಲ್ಲಾ ಸಂಪತ್ತನ್ನು ಯಾಕೆ ಮಾರಿದ್ದಾರೆ? ಇದು ಭಯೋತ್ಪಾದನೆಯಲ್ಲದಿದ್ದರೆ ಮತ್ಯಾವುದು ಭಯೋತ್ಪಾದನೆ? ಇದು ಬಿಜೆಪಿಯ ಭ್ರಷ್ಟಾಚಾರದ ಭಯೋತ್ಪಾದನೆ.

ರಾಜಕಾರಣಿಗಳಿಗೆ ಅಧಿಕಾರ, ಹಾಗೂ ಹಣದ ಲಾಲಸೆ ತಲೆಗೇರಿದರೆ ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ಇದಕ್ಕಾಗಿ ಅವರು ಜನರ ಸಮಸ್ಯೆ ಬಗ್ಗೆ ಮಾತನಾಡದೇ ಕೇವಲ ಧರ್ಮ, ಜಾತಿಯ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಭಾವನೆಗಳ ಕೇರಳಿಸಿ, ತಾವು ಚುನಾವಣೆ ಗೆದ್ದರೆ ಕೆಲಸ ಮಾಡುವ ಯಾವುದೇ ಅಗತ್ಯವಿಲ್ಲ ಎಂಬ ಮನಸ್ಥಿತಿಗೆ ತಲುಪುತ್ತಾರೆ. ಚುನಾವಣೆ ನಮ್ಮ ಭವಿಷ್ಯ ಬದಲಿಸುವ ಸರ್ಕಾರ ಆರಿಸುವ ಒಂದು ಅವಕಾಶವಾಗಿರುತ್ತದೆ. ಈ ಅವಕಾಶವನ್ನು ನೀವು ಸದ್ಬಳಕೆ ಮಾಡಿಕೊಳ್ಳಿ.

ನೀವು ನಿಮ್ಮ ಪರಿಶ್ರಮದಿಂದ ನಂದಿನಿ ಕಟ್ಟಿ ಬೆಳೆಸಿದ್ದು, ಇದು ನಿಮ್ಮ ಹೆಮ್ಮೆಯ ಪ್ರತೀಕವಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ರಾಜ್ಯದಲ್ಲಿ ಹೆಚ್ಚು ಹಾಲು ಉತ್ಪಾದನೆ ಆಗಿ, ಕ್ಷೀರ ಭಾಗ್ಯ ಯೋಜನೆ ಜಾರಿ ಮಾಡಲಾಗಿತ್ತು. ರೈತರಿಗೆ ಕಾಂಗ್ರೆಸ್ ಸರ್ಕಾರ 5 ರೂ. ಪ್ರೋತ್ಸಾಹ ಧನ ನೀಡುತ್ತಿತ್ತು. ಆದರೆ ಈಗ ನಂದಿನಿಯಲ್ಲಿ ಕೇವಲ 71 ಲಕ್ಷ ಲೀಟರ್ ಹಾಲು ಮಾತ್ರ ಉತ್ಪಾದನೆ ಆಗುತ್ತಿದ್ದು, ಹೀಗಾಗಿ ಅಮೂಲ್ ಹಾಲು ರಾಜ್ಯದ ಮಾರುಕಟ್ಟೆಗೆ ಪರಿಚಯಿಸುತ್ತೇವೆ ಎನ್ನುತ್ತಿದ್ದಾರೆ. ಇದು ನಂದಿನಿ ಸಂಸ್ಥೆಯನ್ನು ನಾಶ ಮಾಡಿ ಗುಜರಾತಿನ ಅಮೂಲ್ ಜತೆ ವಿಲೀನ ಮಾಡುವ ಹುನ್ನಾರ. ಇದು ಸಾಧ್ಯವಾದರೆ, ರಾಜ್ಯದ 1 ಕೋಟಿ ಜನರ ದಿನನಿದ್ಯದ ಆದಾಯಕ್ಕೆ ಪೆಟ್ಟು ಬೀಳುತ್ತದೆ. ಈ ಜನರ ಬಗ್ಗೆ ಬಿಜೆಪಿ ಆಲೋಚಿಸುತ್ತಿಲ್ಲ. ಅವರು ಕೇವಲ ಎಲ್ಲಿ ಎಷ್ಟು ಲೂಟಿ ಮಾಡಬೇಕು ಎಂದು ಆಲೋಚಿಸುತ್ತಿದ್ದಾರೆ. 

ಕಾಂಗ್ರೆಸ್ ಸರ್ಕಾರ ಇದ್ದಾಗ ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರ ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಯೋಜನೆ ನೀಡಿತ್ತು. ಕಾಂಗ್ರೆಸ್ ಮುಂದೆ ಸರ್ಕಾರ ರಚಿಸಿದರೆ ಜನರಿಗಾಗಿ ಐದು ಗ್ಯಾರಂಟಿ ಯೋಜನೆ ಘೋಷಿಸಿದೆ. ಈಗಲೂ ನಾವು 100% ಅಭಿವೃದ್ಧಿಯ ಬದ್ಧತೆಯೊಂದಿಗೆ ನಿಮ್ಮ ಮುಂದೆ ಬಂದಿದ್ದೇವೆ. ರಾಜ್ಯದ ಜನರ ಕಷ್ಟಕ್ಕೆ ಯಾವುದಾದರೂ ಯೋಜನೆ ಮೂಲಕ ಸಹಾಯ ಮಾಡಲಾಗುತ್ತಿತ್ತು. ಆದರೆ ಇಂದು ರೈತರಿಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ. ಈ ಬಗ್ಗೆ ಹೋರಾಟ್ ಮಾಡಿದರೂ ಯಾರೂ ಕೇಳುತ್ತಿಲ್ಲ. ಜಗದೀಶ್ ಶೆಟ್ಟರ್, ಸವದಿಯಂತಹ ಹಿರಿಯರನ್ನು ಬಿಜೆಪಿ ಸರಿಯಾಗಿ ನಡೆಸಿಕೊಂಡಿಲ್ಲ.

ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವ ಬದಲು, ಇದ್ದ ಉದ್ಯೋಗಗಳನ್ನು ನಾಶ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಜನರ ಸಂಕಷ್ಟವನ್ನು ಅರಿತು, ಈ ಸರ್ಕಾರ ಮಾಡಿರುವ ಲೂಟಿ ಹಣವನ್ನು ಮತ್ತೆ ಜನರಿಗೆ ಹಿಂತಿರುಗಿಸಲು ಮುಂದಾಗಿದೆ. ನಿಮಗೆ ಶೇ.100ರಷ್ಟು ಪ್ರಗತಿ ನೀಡುವ ಗ್ಯಾರಂಟಿ ನೀಡುತ್ತೇವೆ. ಹೆಚ್ಚು ಉದ್ಯೋಗ ಸೃಷ್ಟಿಸುತ್ತೇವೆ. ಬೀದರ್ ನಿಂದ ಚಾಮರಾಜನಗರದ ವರೆಗೆ ಉದ್ಯೋಗ ಸೃಷ್ಟಿಗೆ ಕೈಗಾರಿಕ ಕಾರಿಡಾರ್ ಮಾಡುತ್ತೇವೆ. ಈ ಸರ್ಕಾರ 1.50 ಲಕ್ಷ ಕೋಟಿ ಲೂಟಿ ಮಾಡಿದ್ದು, ಆ ಹಣವನ್ನು ರೈತರಿಗೆ ನೀಡಲು ನಿರ್ಧರಿಸಿದ್ದೇವೆ. ಸರ್ಕಾರದ ಇಲಾಖೆಗಳಲ್ಲಿರುವ 2.50 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡಲಾಗುವುದು. ಆಮೂಲಕ ಪ್ರತಿ ಮನೆಗೆ ಸುಮಾರು 1500 ರೂ. ಉಳಿತಾಯವಾಗಲಿದೆ. ಈ ಭಾಗದಲ್ಲಿ 200 ಕುಟುಂಬ ಹೊರತಾಗಿ ಉಳಿದವರು ಯಾರೂ ಕರೆಂಟ್ ಬಿಲ್ ಕಟ್ಟುವಂತಿಲ್ಲ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ಇನ್ನು ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬಗಳ ಪ್ರತಿ ಸದಸ್ಯನಿಗೆ ತಿಂಗಳಿಗೆ ತಲಾ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಇನ್ನು ನಿರುದ್ಯೋಗ ಯುವಕರಿಗಾಗಿ ಪದವೀಧರರಿಗೆ ಪ್ರತಿ ತಿಂಗಳು 3000 ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಇನ್ನು ಸಾರ್ವಜನಿಕ ಬಸ್ ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಯೋಜನೆಗಳನ್ನು ಪ್ರಕಟಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ವೇತನ 15 ಸಾವಿರ ಮಾಡಲಾಗುವುದು, ಅಂಗನವಾಡಿ ಸಹಾಯಕಿಯರಿಗೆ 10 ಸಾವಿರ ಗೌರವಧನ ನೀಡಲಾಗುವುದು. ಆಶಾಕಾರ್ಯಕರ್ತರಿಗೆ 8 ಸಾವಿರ ಗೌರವ ಧನ, ಅಂಗನವಾಡಿ ಕಾರ್ಯಕರ್ತೆಯರಿಗೆ ನಿವೃತ್ತಿ ವೇಳೆ 3 ಲಕ್ಷ ಸಹಾಯಕಿಯರಿಗೆ 2 ಲಕ್ಷ ನೀಡಲಾಗುವುದು. ಈ ಎಲ್ಲಾ ಯೋಜನೆ ಸೇರಿಸಿದರೆ, ಪ್ರತಿ ತಿಂಗಳು ಪ್ರತಿ ತಿಂಗಳು 8500 ರೂ ನೀಡಿದಂತಾಗುತ್ತದೆ. ಸಣ್ಣ ವ್ಯಾಪಾರಿ ವರ್ತಕರಿಗೆ ಪ್ರತ್ಯೇಕ ನಿಧಿ ಸ್ಥಾಪಿಸಲಾಗುವುದು. 

ಬೆಂಗಳೂರಿನಂತೆ 2ನೇ ಹಂತದ ನಗರಗಳನ್ನು ಅಭಿವೃದ್ಧಿಪಡಿಸಿ ಉದ್ಯೋಗ ಸೃಷ್ಟಿಸಲಾಗುವುದು. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನ ಹೆಚ್ಚಾಗಲಿದ್ದು, ಇವುಗಳ ತಯಾರಿಕಾ ಘಟಕವನ್ನು ಕರ್ನಾಟಕದಲ್ಲಿ ಹೆಚ್ಚು ಆದ್ಯತೆ ನೀಡಲಾಗುವುದು. ನಿಷ್ಠಾವಂತ, ಪ್ರಮಾಣಿಕ ಸರ್ಕಾರ ಜನರಿಗೆ ನರವಾಗಿ ಹೇಗೆ ಈ ರಾಜ್ಯವನ್ನು ಅಭಿವೃದ್ಧಿ ಮಾಡಲಿದೆ ಎಂಬುದನ್ನು ಸಾಬೀತುಪಡಿಸುತ್ತೇವೆ. ಇಂತಹ ಜನಪರ ಸರ್ಕಾರ ಬರಬೇಕು ಎಂದರೆ ಇದರಲ್ಲಿ ನಿಮ್ಮ ಪಾತ್ರ ಬಹಳ ದೊಡ್ಡದು. ಹೀಗಾಗಿ ನೀವು ಮೇ 10ರಂದು ಮತ ಚಲಾವಣೆ ಮಾಡಬೇಕು. ನೀವು ಭ್ರಷ್ಟ ನಾಯಕರನ್ನು ಆಯ್ಕೆ ಮಾಡುತ್ತೀರೋ, ಉತ್ತಮ ನಾಯಕನ ಆರಿಸಿ ತರುತ್ತೀರೋ ನೀವೇ ನಿರ್ಧರಿಸಿ. ಇಂದು ನಿಮಗೆ ಉತ್ತಮ ಸರ್ಕಾರ ಬೇಕಾದರೆ, ನೀವು ನಿಮ್ಮ ಗಮನವನ್ನು ಈ ಚುನಾವಣೆ ಬಗ್ಗೆ ಕೇಂದ್ರೀಕರಿಸಬೇಕು. 

ನಿಮ್ಮ ರಾಜ್ಯದಲ್ಲಿ ಮಾತ್ರವಲ್ಲ ಬೇರೆ ರಾಜ್ಯಗಳಲ್ಲಿ ವಿಭಿನ್ನ ರಾಜಕೀಯ ಚಿತ್ರಣ ಸಿಗುತ್ತಿದೆ. ಇಂದು ಪ್ರಧಾನಿ ಮೋದಿ ಅವರಿಂದ ಅವರ ನಾಯಕರು ಇಲ್ಲಿಗೆ ಬಂದು ನಿಮ್ಮ ಬಗ್ಗೆ ಮಾತನಾಡುವುದಿಲ್ಲ, ಬದಲಿಗೆ ಅವರ ಬಗ್ಗೆ ಅವರು ಮಾತನಾಡುತ್ತಾರೆ. ಅವರು ನಿಮ್ಮ ಮುಂದೆ ಬಂಧು ಧರ್ಮ, ಜಾತಿ ಬಗ್ಗೆ ಮಾತನಾಡಿ ನಿಮ್ಮ ಮತ ಸೆಳೆಯಲು ಪ್ರಯತ್ನಿಸುತ್ತಾರೆ. ನಿಮ್ಮ ಮತ ಅವರ ಪಾಲಾದರೆ, ಮತ್ತೆ ಅವರು ಕೆಲಸ ಮಾಡುವುದಿಲ್ಲ. ನಿಮ್ಮನ್ನು ಲೂಟಿ ಮಾಡುತ್ತಾರೆ. ಅವರು ನಿಜವಾಗಿಯೂ ಕೆಲಸ ಮಾಡಿದ್ದರೆ, ಪ್ರಧಾನಿಗಳು ಇಲ್ಲಿಗೆ ಬಂದು ತಮ್ಮ ವಿರುದ್ಧ ಆಗಿರುವ ಟೀಕೆಗಳ ಪಟ್ಟಿ ನೀಡುತ್ತಿರಲಿಲ್ಲ, ಬದಲಿಗೆ ಅವರ ಸಾಧನೆಗಳ ಪಟ್ಟಿ ನೀಡುತ್ತಿದ್ದರು. ಎಷ್ಟು ಶಾಲೆ ತೆರೆದಿದ್ದೇವೆ, ಎಷ್ಟು ಉದ್ಯೋಗ ನೀಡಿದ್ದೇವೆ, ಎಷ್ಟು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳುತ್ತಿದ್ದರು. ಆದರೆ ಇವುಗಳ ಬಗ್ಗೆ ಮಾತನಾಡಲು ಅವರು ಏನೂ ಮಾಡಿಲ್ಲ, ಹೀಗಾಗಿ ಜಾತಿ, ಧರ್ಮದ ಹೆಸರಿನಲ್ಲಿ ಭಾವನಾತ್ಮಕ ವಿಚಾರ ಮಾತನಾಡಿ ನಿಮ್ಮ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಆಮೂಲಕ ತಮ್ಮ ವೈಫಲ್ಯ ಮುಚ್ಚಿಕೊಳ್ಳುತ್ತಾರೆ.

17:44 PM

Karnataka Election 2023: ಇಡೀ ರಾಜ್ಯ ಸ್ನೇಹ, ವಿಶ್ವಾಸ ತೋರುತ್ತಿದೆ

ಇಡೀ ರಾಜ್ಯ ಸ್ನೇಹ, ವಿಶ್ವಾಸ ತೋರುತ್ತಿದೆ. ಇವತ್ತು ಶಿವಮೊಗ್ಗದ ಈ ನೆಲದಿಂದ, ರೈತ ಬಂದು ಯಡಿಯೂರಪ್ಪನವರ ನೆಲದಿಂದ ಇಡೀ ಕರ್ನಾಟಕಕ್ಕೆ ವಿಶ್ವಾಸ ನೀಡುತ್ತೇನೆ. ಅಸಲಿ ಗ್ಯಾರಂಟಿ ನೀಡುತ್ತೇನೆ. ನೀವು ಕೊಟ್ಟ ಪ್ರೀತಿ, ಆಶೀರ್ವಾದ ಮಾಡಿ, ಕರ್ನಾಟಕದ ಅಭಿವೃದ್ಧಿಯನ್ನು ಮಾಡಿ ಬಡ್ಡಿ ಸಮೇತ ನಿಮಗೆ ಹಿಂತಿರುಗಿಸುತ್ತೇನೆ. ಬಂದು ಭಗಿನಿಯರೇ ಈ ಕ್ಷೇತ್ರ, ದೇಶದಲ್ಲೆ ವಿಶಿಷ್ಟ ಕ್ಷೇತ್ರವಾಗಿದೆ. ಇಲ್ಲಿಯ ಫಸಲು ಸಾಕಷ್ಟು ವಿಶೇಷವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯ ಅಡಿಕೆ ಆಮದು ನೀತಿಯನ್ನು ಒಮ್ಮೆ ತುಲನೆ ಮಾಡಿ ನೋಡಿ, ಆಗ ನಿಮಗೆ ಅರ್ಥವಾಗುತ್ತದೆ ಯಾವ ಪಕ್ಷ ನಿಮಗೆ ಆತ್ಮೀಯವಾಗಿದೆ ಎಂದು ಗೊತ್ತಾಗುತ್ತದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ಅಡಿಕೆ ಆಮದು ಸಮಸ್ಯೆ ಎದುರಾಗಿತ್ತು. ಆಗ ಅವರು ಗುಜರಾತ್‌ಗೆ ಬಂದು ಅಡಿಕೆ ಆಮದು ಸಮಸ್ಯೆಯ ವಿಚಾರವಾಗಿ ಮಾತನಾಡಲು ಬಂದಿದ್ದರು. ಆಗ ಅವರು ಹೇಳಿದಂತೆ ನಾನು ನಡೆದುಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. 

17:16 PM

Karnataka Election 2023: ಬೆಂಗಳೂರಿನಲ್ಲಿ ಸಿಕ್ಕ ಪ್ರೋತ್ಸಾಹ ಮರೆಯಲಾಗದು

ಕರ್ನಾಟಕದಲ್ಲಿ ಹೋದಲೆಲ್ಲಾ ನನ್ನ ಮೇಲೆ ಎಷ್ಟು ಪ್ರೀತಿಯಿದೆ ಎಂದರೆ, ನನ್ನ ಹಾಗೂ ನಿಮ್ಮಗಳ ಪ್ರೀತಿಯ ನಡುವೆ ಭಾಷೆ ಎಂದು ಅಡ್ಡಿಯಾಗಿಲ್ಲ. ಈ ಪ್ರೀತಿಯನ್ನ ನಾನೆಂದಿಗೂ ಮರೆಯೋದಿಲ್ಲ. ಇಲ್ಲಿಗೆ ಬರುವುದಕ್ಕೂ ಮೊದಲು ಬೆಂಗಳೂರಿನಲ್ಲಿ ಜನತಾ ಜನಾರ್ಧನರ ದರ್ಶನಕ್ಕೆ ಬಂದಿದ್ದೆ. ಯಾವುದೇ ಪಕ್ಷ ಬೆಳಗ್ಗೆ 11 ಗಂಟೆಗೂ ಮೊದಲು ಯಾವುದೇ ಕಾರ್ಯಕ್ರಮ ಸಂಘಟಿಸಲು ಮುಂದಾಗುವುದಿಲ್ಲ. ಆದರೆ ಇವತ್ತು ನಾನು ಬೆಳಗ್ಗೆ ಬೆಳಗ್ಗೆ ಜನತೆಯ ದರ್ಶನಕ್ಕೆ ಹೊರಟಿದ್ದೆ, ಈಶ್ವರ ರೂಪಿ ಜನರು ಪುಷ್ಟವೃಷ್ಟಿ ಮಾಡಿದರು. ಇವತ್ತು ಬಹಳಷ್ಟು ದೂರದ ರೋಡ್​ ಶೋ ಇತ್ತು. ಆದರೆ ಇವತ್ತು ನೀಟ್ ಎಕ್ಸಾಮ್​ ಇದೆ ಎಂದು ಗೊತ್ತಾಯ್ತು. ಹಾಗಾಗಿ ನಾನು ಹೇಳಿದೆ, ಇವತ್ತು ಮಕ್ಕಳ ಎಕ್ಸಾಮ್​ ಇದೆ ನಮ್ಮ ಪರೀಕ್ಷೆ ಮೇ 10 ಕ್ಕಿದೆ. ಹಾಗಾಗಿ ಮಕ್ಕಳ ಎಕ್ಸಾಮ್‌ಗೆ ಅವಕಾಶ ಕಲ್ಪಿಸಬೇಕು ಎಂದೆ. ಅದೇ ಕಾರಣಕ್ಕೆ ಬೆಳಗ್ಗೆ ಬೆಳಗ್ಗೆ ನಾವು ರೋಡ್ ಶೋ  ಆಯೋಜಿಸಿದ್ದವು. ಆದರೆ ಬೆಂಗಳೂರಿನಲ್ಲಿ ಸಿಕ್ಕ ಪ್ರೋತ್ಸಾಹ ಮರೆಯಲಾಗದು. ನಾನು ಕರ್ನಾಟಕಕ್ಕೆ ಋಣಿಯಾಗಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು. 

17:02 PM

Karnataka Election 2023 Live Updates: ಕಾಂಗ್ರೆಸ್ ನಾಯಕರಿಗೆ ಕ್ರಿಮಿನಲ್ ಮಾನನಷ್ಟ ನೋಟೀಸ್ ಜಾರಿಗೊಳಿಸಿದ ಬಿಜೆಪಿ

ಕಾಂಗ್ರೆಸ್ ನಾಯಕರಿಗೆ ಕ್ರಿಮಿನಲ್ ಮಾನನಷ್ಟ ನೋಟೀಸ್ ಜಾರಿಗೊಳಿಸಿದ ಬಿಜೆಪಿ. ಭ್ರಷ್ಟಾಚಾರದ ರೇಟ್ ಕಾರ್ಡ ಪ್ರಕಟಿಸಿದ ಆರೋಪಕ್ಕೆ ಸ್ಪಷ್ಟಣೆ ಕೋರಿ ನೋಟಿಸ್. ಇಂದು ಅಥವಾ ನಾಳೆಯೊಳಗೆ ಉತ್ತರಿಸದಿದ್ದಲ್ಲಿ ಕ್ರಿಮಿನಲ್ ಡಿಫಮೇಷನ್ ದಾಖಲಿಸಲು ಎಚ್ಚರಿಕೆ. ಮಾಧ್ಯಮಗಳಲ್ಲಿ ಪ್ರಕಟಿಸಿರುವ ಜಾಹಿರಾತು ಪೇಯ್ಡ್ ಆಗಿದ್ದು, ದುರುದ್ದೇಶದಿಂದ ಕೂಡಿದೆ. ಕಾಂಗ್ರೆಸ್ ತಕ್ಷಣ  ಬಿಜೆಪಿಗೆ ಬೇಷರತ್ತ ಕ್ಷಮೆ ಕೋರಬೇಕು..ಪತ್ರಿಕೆಗಳ ಮೂಲಕ ಆರೋಪ ತಪ್ಪು ಗ್ರಹಿಕೆಯಿಂದ ನಡೆದಿದೆ ಎಂದು ಜಾಹಿರಾತು ನೀಡಬೇಕು. ಇಲ್ಲದಿದ್ದಲ್ಲಿ ಕಾನೂನು ಕ್ರಮ ಎದುರಿಸಿ ಎಂದು ನೋಟಿಸಿನಲ್ಲಿ ಉಲ್ಲೇಖ. ಬ್ರರಷ್ಟಾಚಾರದ ರೇಟ್ ಕಾರ್ಡ ಪ್ರಕಟಿಸಿದ ಆರೋಪಕ್ಕೆ ಸ್ಪಷ್ಟಣೆ ಕೋರಿ ನೋಟಿಸ್. ಇಂದು ಅಥವಾ ನಾಳೆಯೊಳಗೆ ಉತ್ತರಿಸದಿದ್ದಲ್ಲಿ ಕ್ರಿಮಿನಲ್ ಡಿಫಮೇಷನ್ ದಾಖಲಿಸಲು ಎಚ್ಚರಿಕೆ. ಮಾಧ್ಯಮಗಳಲ್ಲಿ ಪ್ರಕಟಿಸಿರುವ ಜಾಹಿರಾತು ಪೇಯ್ಡ್ ಆಗಿದ್ದು, ದುರುದ್ದೇಶದಿಂದ ಕೂಡಿದೆ. ಕಾಂಗ್ರೆಸ್ ತಕ್ಷಣ  ಬಿಜೆಪಿಗೆ ಬೇಷರತ್ತ ಕ್ಷಮೆ ಕೋರಬೇಕು..ಪತ್ರಿಕೆಗಳ ಮೂಲಕ ಆರೋಪ ತಪ್ಪು ಗ್ರಹಿಕೆಯಿಂದ ನಡೆದಿದೆ ಎಂದು ಜಾಹಿರಾತು ನೀಡಬೇಕು. ಇಲ್ಲದಿದ್ದಲ್ಲಿ ಕಾನೂನು ಕ್ರಮ ಎದುರಿಸಿ ಎಂದು ನೋಟಿಸಿನಲ್ಲಿ ಉಲ್ಲೇಖ. 

16:50 PM

Karnataka Election 2023: ಬಿಜೆಪಿ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬರಲಿದೆ ಎಂಬುದು ಖಾತರಿಯಾಗಿದೆ 

ನಾನು ಯಡಿಯೂರಪ್ಪನವರ ಜನ್ಮದಿನದಂದು ಶಿವಮೊಗ್ಗಕ್ಕೆ ಬಂದಿದ್ದೆ. ಕೆಲದಿನಗಳ ಹಿಂದೆ ಈಶ್ವರಪ್ಪನವರೊಂದಿಗೆ ಫೋನ್‌ನನಲ್ಲಿ ಮಾತನಾಡಿದ್ದೇನೆ. ಶಿವಮೊಗ್ಗವೂ ನಮ್ಮೆಲ್ಲರಿಗೂ ಬಹಳಷ್ಟು ಸ್ನೇಹ, ವಿಶ್ವಾಸ ಹಾಗೂ ಭರವಸೆ ನೀಡಿದೆ. ಇವತ್ತು ನನಗೆ ನಂಬಿಕೆ ಮೂಡಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬರಲಿದೆ ಎಂಬುದು ಖಾತರಿಯಾಗಿದೆ. ಯಡಿಯೂರಪ್ಪನವರು ಕೈಗೊಂಡ ಸಂಕಲ್ಪ ಪೂರ್ಣಗೊಳ್ಳಲಿದೆ. ಪೂರ್ಣ ಕರ್ನಾಟಕ ಹೇಳುತ್ತಿದೆ. ಈ ಭಾರೀಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಹೇಳುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. 

16:31 PM

Karnataka Election 2023: ಶಿವಮೊಗ್ಗದ ಜನತೆಗೆ ನಮಸ್ಕಾರಗಳು - ಪ್ರಧಾನಿ ಮೋದಿ

ಮಲೆನಾಡಿನ ಮಡಿಲು ಸೌಂದರ್ಯದ ಹೊನಲು, ಶಿವಮೊಗ್ಗದ ಜನತೆಗೆ ನಮಸ್ಕಾರಗಳು, ಕುವೆಂಪುರವರ ಈ ನೆಲೆಗೆ ನಾನು ಶ್ರದ್ಧಾಪೂರ್ವಕವಾಗಿ ನಮಸ್ಕರಿಸುತ್ತೇವೆ. ದೇವಿ ಸಿಗಂದೂರು ಚೌಡೇಶ್ವರಿಗೂ ತಲೆಭಾಗಿ ನಮಸ್ಕರಿಸುತ್ತೇನೆ. ಶಿವಮೊಗ್ಗದಲ್ಲಿ ಕೋಟೆ ಆಂಜನೇಯ ಸ್ವಾಮಿ ಇದ್ದಾರೆ, ಆ ದೇವರಿಗೆ ಇವತ್ತು ಇಡೀ ಹಿಂದೂಸ್ತಾನ ಪ್ರಣಾಮ ಮಾಡುತ್ತಿದೆ. ಪೂಜ್ಯ ಶ್ರೀಧರಸ್ವಾಮಿಯವರಿಗೂ ಶ್ರದ್ಧೆಯಿಂದ ನಮಸ್ಕರಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು. 

16:22 PM

Karnataka Election 2023 Live Updates: ಆಯನೂರು ಗ್ರಾಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ

ಆಯನೂರು ಗ್ರಾಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ. ಜನರತ್ತ ಕೈ ಬೀಸಿದ ಪ್ರಧಾನಿ. ಆಯನೂರು ಗ್ರಾಮದ ಮೈದಾನದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರ ಕಾರ್ಯಕ್ರಮ. 

16:10 PM

Karnataka Election 2023 Live Updates: ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅಮಿತ್ ಶಾ ರೋಡ್‌ ಶೋ 

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ರೋಡ್ ಶೋ ನಡೆಯಿತು. ದಕ್ಷಿಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ಪರ ಮತಯಾಚನೆ ಮಾಡಿದರು. ತೆರೆದ ವಾಹನದಲ್ಲಿ ಅಮಿತ್ ಶಾ ಮತಬೇಟೆಯಾಡಿದರು. ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ, ಗೋವಾ ಸಿಎಂ ಪ್ರಮೋದ್ ಸಾವಂತ್ ಅಮಿತ್ ಶಾಗೆ ಸಾಥ್ ನೀಡಿದ್ದರು.

15:48 PM

Karnataka Election 2023 Live Updates:ಮೋದಿ ರೋಡ್‌ ಶೋಗೆ ಕಲಾ ತಂಡಗಳ ಮೆರುಗು ನೀಡಿವೆ.. ಹುಲಿ ಕುಣಿತ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾತಂಡಗಳ ಪ್ರದರ್ಶನ ಕಣ್ಮನ ಸೆಳೆಯಿತು.. 

 

15:38 PM

Karnataka Election 2023 Live Updates: ಕರಾವಳಿ ಭಾಗದಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ

ಕರಾವಳಿಯ ಚುನಾವಣಾ ಪ್ರಚಾರದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ದ.ಕ. ಜಿಲ್ಲೆಗೆ ಪ್ರಥಮ ಬಾರಿಗೆ ಆಗಮನ. ಮುಲ್ಕಿ ಕೊಲ್ನಾಡು ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ, ಮೂಡಬಿದ್ರೆ ಕ್ಷೇತ್ರದ ಪರ ಪ್ರಚಾರ. ಕಾಪು ಕ್ಷೇತ್ರ ಹಾಗೂ ಇತರ ವಿಧಾನಸಭಾ ಕ್ಷೇತ್ರಗಳ ಪರವಾಗಿ ಪ್ರಚಾರ

15:05 PM

Karnataka Election 2023 Live Updates: ಕನಕಪುರದಲ್ಲಿ ಅಶೋಕ ಪರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರ್ಜರಿ ರೋಡ್ ಶೋ

ಇಂದು ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿ ಆರ್. ಅಶೋಕ್  ಪರ ಪ್ರಚಾರ ನಡೆಸಿದ ಬಳಿಕ ಅವರು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಮ್ಮ ಉತ್ಸಾಹ ನೋಡಿದರೆ ಕನಕಪುರದಲ್ಲಿ ಬಿಜೆಪಿಯ ಕಮಲ ಅರಳಲಿದೆ ಎಂದು ‌ಹೇಳಿದರು. 

14:33 PM

Karnataka Election 2023 Live Updates:  ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ 

ಶಿವಮೊಗ್ಗ: ಶಿವಮೊಗ್ಗಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ. ಆಯನೂರಿನಲ್ಲಿ ನಡೆಯುವ ಬಿಜೆಪಿ ಸಮಾವೇಶದಲ್ಲಿ ಭಾಗಿ.

13:56 PM

Karnataka Election 2023 Live Updates: ಕನಕಪುರ ಕೋಟೆಗೆ ಸಿಎಂ ಬೊಮ್ಮಾಯಿ ಎಂಟ್ರಿ 

ಕನಕಪುರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿದ್ದಾರೆ. ಕನಕಪುರದ ಪ್ರಮುಖ ರಸ್ತೆಯಲ್ಲಿ ರೋಡ್ ಶೋ. ನಗರದ KSRTC ಬಸ್ ನಿಲ್ದಾಣದಿಂದ ಅಯ್ಯಪ್ಪಸ್ವಾಮಿ ದೇವಸ್ಥಾನ ಮಾರ್ಗವಾಗಿ ಮುಖ್ಯರಸ್ತೆಯಲ್ಲಿ ರೋಡ್ ಶೋ. ಸಿಎಂ ಬೊಮ್ಮಾಯಿಗೆ ಆರ್.ಅಶೋಕ್ ಸಾಥ್.‌ ಸಾವಿರಾರು ಜನ ಬಿಜೆಪಿ ಕಾರ್ಯಕರ್ತರು ರೋಡ್ ಶೋ ನಲ್ಲಿ ಭಾಗಿ. ಸಿಎಂ ಆಗಮನ ಹಿನ್ನಲೆ ಬಿಗಿ ಪೊಲೀಸ್ ಬಂದೋಬಸ್ತ್. ರಾಮನಗರ ರಸ್ತೆಯಿಂದ ಕನಕಪುರದ ಮುಖ್ಯ ರಸ್ತೆಯಲ್ಲಿ ರೋಡ್ ಶೋ. ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಪರ ಮತಶಿಕಾರಿ.

13:40 PM

Karnataka Election 2023 Live Updates: ಎಲೆಕ್ಷನ್ ಕಮಿಷನ್ ನೊಟೀಸ್ ಗೆ ಡಿಕೆಶಿ ಉತ್ತರ

ಬಿಜೆಪಿ ನಾಯಕರಿಗೆ ಡಿಕೆಶಿ ತಿರುಗೇಟು. ರೇಟ್ ಕಾರ್ಡ್ ಕೊಟ್ಟಿದ್ದು ನಾನಲ್ಲ, ಬಿಜೆಪಿಯವರ ರೇಟ್ ಕಾರ್ಡ್ ಕೊಟ್ಟಿದ್ದು ಯತ್ನಾಳ್. ರೇಟ್ ಕಾರ್ಡ್ ಕೊಟ್ಟಿದ್ದು ಗೂಳಿಹಟ್ಟಿ ಶೇಖರ್, ವಿಶ್ವನಾಥ್. ಎಲ್ಲ ಅವರ ಪಾರ್ಟಿಯವರೇ. ಮುಖ್ಯಮಂತ್ರಿ ಸ್ಥಾನಕ್ಕೆ ರೇಟ್ ಎಷ್ಟು? ಮಂತ್ರಿ ಸ್ಥಾನಕ್ಕೆ ಎಷ್ಟು, ಮಠಗಳ ಸ್ವಾಮೀಜಿಗಳಿಂದ ಎಷ್ಟು ಅಂತ ರೇಟ್ ಕಾರ್ಡ್ ಕೊಟ್ಟಿದ್ದು ಬಿಜೆಪಿಯವರೇ ತಾನೇ. ಅದನ್ನು ನಾವು ಜಾಹೀರಾತು ಕೊಟ್ಟಿದ್ದೇವೆ ಅಷ್ಟೇ ಎಂದು ಎಲೆಕ್ಷನ್ ಕಮಿಷನ್ ನೊಟೀಸ್ ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಉತ್ತರಿಸಿದ್ದಾರೆ. 

13:31 PM

Karnataka Election 2023 Live Updates: ಪ್ರೀತಿಯ ನಾಯಿ ಸಾವಿಗೆ ನೊಂದಿರುವ ನಟಿ ರಮ್ಯಾ

ಪ್ರೀತಿಯ ಶ್ವಾನ ನಿಧನದ ಕಾರಣ ನಟಿ ರಮ್ಯಾ ಪ್ರಚಾರ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ. ಇಂದು ಬೆಂಗಳೂರಿನ ಮೂರು ಕಡೆ ರಮ್ಯಾ ಪ್ರಚಾರ ಕಾರ್ಯಕ್ರಮ ನಿಗದಿಯಾಗಿತ್ತು. ನಿನ್ನೆ ರಾತ್ರಿ ನಟಿ ರಮ್ಯಾ ನೆಚ್ಚಿನ ಶ್ವಾನ ಮೃತಪಟ್ಟಿದೆ. ಶ್ವಾನ ಮೃತಪಟ್ಟ ನೋವಿನಿಂದ ಪ್ರಚಾರ ಕಾರ್ಯಕ್ರಮಗಳಿಗೆ ರಮ್ಯಾ ಗೈರಾಗಿದ್ದಾರೆ. ಬೆಂಗಳೂರಿನ ಬಸವನಗುಡಿ, ಜಯನಗರ, ಹೆಬ್ಬಾಳದಲ್ಲಿ ರಮ್ಯಾ ಪ್ರಚಾರ ಕಾರ್ಯಕ್ರಮ  ನಿಗದಿಯಾಗಿತ್ತು. 

13:10 PM

Karnataka Election 2023 Live Updates: ವರುಣ ಸ್ಪರ್ಧೆಯ ಗುಟ್ಟು ಬಿಚ್ಚಿಟ್ಟ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 

ಅಮಿತ್ ಶಾ ಮನೆಗೆ ಬರುವುದಾಗಿ ಹೇಳಿದ್ದರು. ಬಿಎಲ್ ಸಂತೋಷ್ ಅವರಿಗೆ ಕರೆ ಮಾಡಿ ಬೇಡ, ನಾನೇ ಬರುತ್ತೇನೆ ಅಂದೆ. ಆದಿಚುಂಚನಗಿರಿ ಮಠಕ್ಕೆ ಬರುತ್ತಾರೆ. ಅಲ್ಲಿಂದ ನಿಮ್ಮ ಮನೆಗೆ ಬಂದು ಟೀ ಕುಡಿದು ಹೋಗುತ್ತಾರೆ ಅಂದರು. ಅಮಿತ್ ಶಾ ನನ್ನ ಮನೆಗೆ ಬಂದರು. ಚೀಟಿ ತೆಗೆದು ನಾಲ್ಕೈದು ಪ್ರಶ್ನೆ ಕೇಳಿದ್ದರು. ಅದಾದ 8-12 ನಿಮಿಷದಲ್ಲಿ ದೆಹಲಿಗೆ ಬುಲಾವ್ ಬಂತು. ಅಲ್ಲಿ ದೊಡ್ಡವರನ್ನು ಭೇಟಿ ಮಾಡಿಸಿದರು. ಮಗನಿಗೆ ಟಿಕೆಟ್ ಕೊಟ್ಟುಬಿಡಿ ಅಂತ ಕೇಳಿಕೊಂಡೆ. ನೀನು ಹೋಗಿ ನಿಲ್ಲಬೇಕು ಅಂತ ಸೂಚನೆ ನೀಡಿದರು.  ಇದನ್ನು ಚಾಲೆಂಜ್ ಆಗಿ ಸ್ವೀಕಾರ ಮಾಡಿದ್ದೇನೆ. ಬಿನ್ನಿಪೇಟೆ, ಗೋವಿಂದರಾಜನಗರ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ. ವರುಣ, ಚಾಮರಾಜನಗರದ ಹಳ್ಳಿಹಳ್ಳಿ ಸುತ್ತಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ವರುಣ ಸ್ಪರ್ಧೆಯ ಗುಟ್ಟು ಬಿಚ್ಚಿಟ್ಟಿದ್ದಾರೆ. 

13:02 PM

Karnataka Election 2023 Live Updates: ತನ್ನ ಮಗನನ್ನು ಭುಜದ ಮೇಲೆ ಹೊತ್ತು ಮೋದಿ ತೋರಿಸಿದ ತಾಯಿ

ತನ್ನ ಮಗನನ್ನು ಭುಜದ ಮೇಲೆ ಹೊತ್ತು ಮೋದಿ ತೋರಿಸಿದ ತಾಯಿ. ಟ್ರಿನಿಟಿ ಸರ್ಕಲ್ ನಲ್ಲಿ ಮೋದಿ‌ ನೋಡಲು ತಾಯಿ ಜೊತೆ ಬಂದ ಮಗ. ಸಾವಿರಾರು ಜನರ ಮಧ್ಯೆ ಮೋದಿ ನೋಡಲು ಮಗನಿಂದ ಆಗಲಿಲ್ಲ. ಈ ವೇಳೆ ತಾಯಿಯೇ ಮಗನನ್ನ ಭುಜದ ಮೇಲೆ ಕೂರಿಸಿಕೊಂಡು ಮೋದಿ ಅವರನ್ನು ತೋರಿಸಿದರು. 

12:35 PM

Karnataka Election 2023 Live Updates: ಅಮಿತ್‌ ಶಾ ಕಾರ್ಯಕ್ರಮ ಮುಗಿಸಿ ಮರಳುವಾಗ ಅಫಘಾತ

ನಿನ್ನೆ ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಪರ ಪ್ರಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ‌ ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಏಳಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಕ್ರೂಸರ್‌ನಲ್ಲಿ ಅಥಣಿಯಿಂದ ಕೊಟ್ಟಲಗಿಗೆ ತೆರಳುವಾಗ ಮಾರ್ಗ ಮಧ್ಯದಲ್ಲಿ ಅಪಘಾತ ಜರುಗಿದೆ. ಕೊಟ್ಟಲಗಿ - ಕಕಮರಿ ಮಧ್ಯದಲ್ಲಿ ಕ್ರೂಸರ್ ಡ್ರೈವರ ತಪ್ಪಿನಿಂದ ಕ್ರೂಸರ್ ಪಲ್ಟಿಯಾಗಿದೆ. 

12:26 PM

Karnataka Election 2023 Live Updates: ಬೆಳ್ಳಂ‌ಬೆಳಗೆ ಕೈ ಮುಖಂಡನಿಗೆ ಶಾಕ್ 

ಬ್ಯಾಡಗಿಯಲ್ಲಿ ಕೈ ಮುಖಂಡನ ಮನೆ ಮೇಲೆ ಐಟಿ ದಾಳಿ. ಬ್ಯಾಡಗಿ ಕಾಂಗ್ರೆಸ್ ಮುಖಂಡ ಚನ್ನಬಸವ ಯಲಿ ಮನೆ ಮೇಲೆ ಐಟಿ ದಾಳಿ. ಮನೆಯಲ್ಲಿ ಪರಿಶೀಲನೆ ಮಾಡುತ್ತಿರುವ ಅಧಿಕಾರಿಗಳು. ಕೈ ಮುಖಂಡ ಹಾಗೂ ಮೆಣಸಿನಕಾಯಿ ವರ್ತಕ ಚನ್ನಬಸಪ್ಪ ಯಲಿ

11:47 AM

Karnataka Election 2023 Live Updates: ಪ್ರಧಾನಿ ರೋಡ್​ ಶೋ ಮುಕ್ತಾಯ

ಬೆಂಗಳೂರು ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್​ ಶೋ ಮುಕ್ತಾಯಗೊಂಡಿದೆ. ಹೆಚ್​ಎಎಲ್​ ಏರ್​ಪೋರ್ಟ್‌ನತ್ತ ಮೋದಿ ತೆರಳಿದ್ದಾರೆ.

11:45 AM

Karnataka Election 2023 Live Updates: ಸುಧಾಕರ್‌ ಪರ ಕಿಚ್ಚ ಸುದೀಪ್‌-ಬ್ರಹ್ಮಾನಂದಂ ಪ್ರಚಾರ

ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್‌ ಪರ ಸಿನಿ ರಂಗದ ಖ್ಯಾತ ನಟರಾದ ಕಿಚ್ಚ ಸುದೀಪ್‌ ಮತ್ತು ತೆಲುಗು ಹಾಸ್ಯ ನಟ ಬ್ರಹ್ಮಾನಂದಂ ಪ್ರಚಾರ ನಡೆಸಿದರು. 

11:07 AM

Karnataka Election 2023 Live Updates: ನಕಲಿ ಮತದಾನ ಬಗ್ಗೆ ಕ್ರಮ ಕೈಗೊಳ್ಳಲು ಮನವಿ

ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ನಕಲಿ ಮತದಾನದ ಬಗ್ಗೆ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ. ಕುಸುಮಾ ಹನುಮಂತರಾಯಪ್ಪ ಅವರಿಂದ ಉತ್ತರ ವಿಭಾಗ ಡಿಸಿಪಿ ಹಾಗೂ ಚುನಾವಣಾ ಆಯೋಗಕ್ಕೆ ಮನವಿ ನೀಡಲಾಗಿದೆ. ರೈಲ್ವೆ ನಿಲ್ದಾಣ, ಹೋಟೆಲ್, ಬಸ್ ನಿಲ್ದಾಣ, ಕಲ್ಯಾಣ ಮಂಟಪ, ಲಾಡ್ಜ್ ಪರಿಶೀಲನೆ ನಡೆಸುವಂತೆ ಮನವಿ ಮಾಡಲಾಗಿದೆ. 

10:25 AM

Karnataka Election 2023 Live Updates: ಮತದಾರರಿಗೆ ಮತದಾನದ ಮಮತೆಯ ಕರೆಯೋಲೆ 

ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮತದಾರರನ್ನು ಆಕರ್ಷಿಸಲು ಮತದಾರರಿಗೆ ಮತದಾನದ ಮಮತೆಯ ಕರೆಯೋಲೆ ಶೀರ್ಷಿಕೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡುವುದರ ಮುಖಾಂತರ ಯಾದಗಿರಿ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್‌ ಸಮಿತಿ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಪ್ರಸಕ್ತ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಳಕ್ಕೆ ಜಿಲ್ಲಾಡಳಿತ  ನಿತ್ಯ ಒಂದಿಲ್ಲೊಂದು ಮತದಾನ ಜಾಗೃತಿಗಾಗಿ ವಿನೂತನ ಕಾರ್ಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಈ ಪ್ರಯೋಗದ ಮುಂದುವರೆದ ಭಾಗವಾಗಿ ಮತದಾರರಿಗೆ ಮದುವೆಯ ಆಮಂತ್ರಣದ ರೂಪದಲ್ಲಿ ಮತದಾನದ ಮಮತೆಯ ಕರೆಯೋಲೆ ಸಿದ್ದಗೊಂಡಿದೆ.

fallbacks

 

10:13 AM

Karnataka Election 2023 Live Updates: ಇಂದು ನರೇಂದ್ರ ಮೋದಿ ರಾಜ್ಯ ಪ್ರವಾಸ ಅಂತ್ಯ

2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ನರೇಂದ್ರ ಮೋದಿ ರಾಜ್ಯ ಪ್ರವಾಸ ಅಂತ್ಯವಾಗಲಿದೆ. ಇಂದು ತಮ್ಮ ರಾಜ್ಯ ಪ್ರವಾಸ ಮುಗಿಸಿ, ನರೇಂದ್ರ ಮೋದಿ ದೆಹಲಿಗೆ ತೆರಳಲಿದ್ದಾರೆ. ಮಹದೇವಪುರ, ಸರ್.ಸಿ.ವಿ. ರಾಮನ್‌ ನಗರ, ಶಿವಾಜಿನಗರ, ಶಾಂತಿನಗರ ಸೇರಿದಂತೆ 4 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು ನರೇಂದ್ರ ಮೋದಿ ರೋಡ್ ಶೋ. ಬೆಳಿಗ್ಗೆ 10 ಘಂಟೆಯಿಂದ 11:30 ರವರೆಗೆ ರೋಡ್ ಶೋ ನಡೆಸಲಿರುವ ನರೇಂದ್ರ ಮೋದಿ. ಬಳಿಕ ಹೆಚ್‌ಎಎಲ್ ವಿಮಾನನಿಲ್ದಾಣದಿಂದ ಶಿವಮೊಗ್ಗಗೆ ಪ್ರಯಾಣ ಬೆಳೆಸಲಿರುವ ಪ್ರಧಾನಿ. ಅಲ್ಲಿಂದ ನಂಜನಗೂಡಿಗೆ ತೆರಳಲಿರುವ ನರೇಂದ್ರ ಮೋದಿ. ನಂಜನಗೂಡಿನಲ್ಲಿ ನಂಜುಂಡೇಶ್ವರನಿಗೆ ವಿಶೇಷ ಪೂಜೆ ನೆರವೇರಿಸಿ, ದೆಹಲಿಯತ್ತ ಪ್ರಧಾನಿ ಮೋದಿ ಪ್ರಯಾಣ ಬೆಳೆಸಲಿದ್ದಾರೆ. ಈ ಮೂಲಕ 2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ತಮ್ಮ ಪ್ರಚಾರಕ್ಕೆ ತೆರೆ ಎಳೆಯಲಿದ್ದಾರೆ. 

10:01 AM

Karnataka Election 2023 Live Updates: ಪ್ರಧಾನಿ ಮೋದಿ ರೋಡ್‌ ಶೋ ಗ್ರೌಂಡ್‌ ರಿಪೋರ್ಟ್‌

ಬೆಳಗ್ಗೆ 10 ಗಂಟೆಯಿಂದ ಪ್ರಧಾನಿ ಮೋದಿ ಮತಬೇಟೆ ಶುರು. ನ್ಯೂ ತಿಪ್ಪಸಂದ್ರದ ಕೆಂಪೇಗೌಡ ಪ್ರತಿಮೆಗೆ ನಮನ ಸಲ್ಲಿಸಿದ ಬಳಿಕ ರೋಡ್ ಶೋ ಆರಂಭ. ಶಿವಾಜಿನಗರ, ಶಾಂತಿನಗರ ಕ್ಷೇತ್ರದವರೆಗೂ ಮೋದಿ ರೋಡ್‌ ಶೋ.  

09:56 AM

Karnataka Election 2023 Live Updates: ಬೆಂಗಳೂರಿನಲ್ಲಿ ಇಂದು ಕೂಡ ಮೋದಿ ಮೇನಿಯಾ

ಬೆಂಗಳೂರಿನಲ್ಲಿ ಇಂದು ಕೂಡ ಮೋದಿ ಮೇನಿಯಾ ಕಂಟಿನ್ಯೂ. 6 ಕ್ಷೇತ್ರಗಳ ಟಾರ್ಗೆಟ್‌.. 8 ಕಿಲೋ ಮೀಟರ್‌ ರೋಡ್‌ ಶೋ. 8 ಕಿಲೋ ಮೀಟರ್‌ ರೋಡ್‌ ಶೋ ನಡೆಸಲಿರುವ ಪ್ರಧಾನಿ ಮೋದಿ. ಸುಮಾರು ಮೂರು ಗಂಟೆಗಳ ಕಾಲ ಪ್ರಧಾನಿ ಮೋದಿ ಮತಯಾತ್ರೆ. 6 ಕ್ಷೇತ್ರಗಳನ್ನ ಟಾರ್ಗೆಟ್‌ ಮಾಡಿ ಪ್ರಧಾನಿ ಮೋದಿ ಮತಬೇಟೆ.

09:54 AM

Karnataka Election 2023 Live Updates: ಬೆಂಗಳೂರಿನಲ್ಲಿ ಪೊಲೀಸರ ಸರ್ಪಗಾವಲು

ಇಂದು ಬೆಂಗಳೂರಿನಲ್ಲಿ ಎರಡನೇ ಹಂತದ ರೋಡ್‌ ಶೋ ನಡೆಯಲಿದೆ. ಈ ಹಿನ್ನೆಲೆ ನಗರದಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಮೋದಿ ಸಂಚರಿಸುವ ಮಾರ್ಗದಲ್ಲಿ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿದೆ. 2 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಮೋದಿ ಸಂಚರಿಸುವ ಮಾರ್ಗದಲ್ಲಿ ಖಾಕಿ ಕಟ್ಟೆಚ್ಚರ ವಹಿಸಲಾಗಿದೆ.  

Read More