ನವದೆಹಲಿ: ಕೊರೋನಾ ಕೋವಿಡ್ 19 (Covid-19) ಮಹಾಮಾರಿ ವಿರುದ್ಧ ನಿರ್ಣಾಯಕ ಗೆಲುವು ಸಾಧಿಸಲು ಸದ್ಯ ಜಾರಿಯಲ್ಲಿರುವ ಲಾಕ್ಡೌನ್ ಅನ್ನು ಮೇ 3ರವರೆಗೆ ಮುಂದುವರಿಸಿರುವ ನಿರ್ಣಯವನ್ನು ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ (DV Sadanandagowda) ಅವರು ಸ್ವಾಗತಿಸಿದ್ದಾರೆ.
ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಪ್ರತಿಪಕ್ಷಗಳ ನಾಯಕರು, ವೈದ್ಯರು, ವೈರಾಣು ತಜ್ಞರು, ಕೈಗಾರಿಕೋದ್ಯಮಿಗಳು, ಆಡಳಿತ ತಜ್ಜರ ಅಭಿಪ್ರಾಯ ಪಡೆದು ಪ್ರಧಾನಿ ನರೇಂದ್ರ ಮೋದಿ (Narendra Modi) ಮೇ 3ರವರೆಗೆ ಲಾಕ್ಡೌನ್ ಮುಂದುವರಿಸುವ ಬಗ್ಗೆ ನಿರ್ಣಯ ಪ್ರಕಟಿಸಿದ್ದಾರೆ. ಇದು ಅತ್ಯಂತ ಸಮಯೋಚಿತ ನಿರ್ಣಯವಾಗಿದೆ. ಈ ಸಂದರ್ಭದಲ್ಲಿ ಇದಕ್ಕಿಂತ ಉತ್ತಮ ನಿರ್ಧಾರ ಸಾಧ್ಯವಿರಲಿಲ್ಲ. ಇದನ್ನು ನಾನು ಸಂಪೂರ್ಣವಾಗಿ ಸ್ವಾಗತಿಸುತ್ತಿದ್ದೇನೆ. ಫಿಕ್ಕಿ ಸೇರಿದಂತೆ ಎಲ್ಲ ಸಂಘ-ಸಂಸ್ಥೆಗಳು ಈ ನಿರ್ಣಯವನ್ನು ಸ್ವಾಗತಿಸಿವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತೀವ್ರ ಸಾಂಕ್ರಾಮಿಕ ಕೊರೋನಾ ವಿರುದ್ಧ ಗೆಲುವು ಸಾಧಿಸಬೇಕಾದರೆ ಲಾಕ್ಡೌನ್ (Lockdown) ನಿಯಮ ಕಟ್ಟುನಿಟ್ಟಾಗಿ ಪಾಲಿಸುವುದು ಅನಿವಾರ್ಯ. ಇದಕ್ಕಾಗಿ ನರೇಂದ್ರ ಮೋದಿ ಹಾಕಿಕೊಟ್ಟ ಸಪ್ತಸೂತ್ರಗಳನ್ನು ಪಾಲಿಸೋಣ, ಕೊರೋನಾ ವಿರುದ್ಧ ಜಯಿಸೋಣ. ಕೊರೋನಾ ಮಹಾಮಾರಿಯ ವಿರುದ್ಧ ಪ್ರಾಣವನ್ನೇ ಪಣಕ್ಕಿಟ್ಟು ಜನರಿಗಾಗಿ ಹೋರಾಡುತ್ತಿರುವವರು ವೈದ್ಯರು, ಅರೆವೈದ್ಯರು, ಶುಶ್ರೂಷಕರು, ಪೊಲೀಸರು, ಸ್ವಚ್ಚತಾ ಸಿಬ್ಬಂದಿ ಅವರಿಗೆಲ್ಲ ಕೃತಜ್ಞರಾಗಿರೋಣ. ಅವರನ್ನು ಗೌರವಿಸೋಣ, ಆದರಿಸೋಣ. ಅವರಿಗೆ ನಮ್ಮ ಕೈಲಾದ ಸಹಾಯ ಮಾಡೋಣ ಎಂದು ಹೇಳಿದ್ದಾರೆ.
ಕೊರೊನಾವೈರಸ್ (Coronavirus)ಕ್ಕೆ ಸದ್ಯ ಲಸಿಕೆ ತಯಾರಾಗಿಲ್ಲ. ಈಗಿರುವ ಒಂದೇಒಂದು ಮದ್ದು ಏನಂದರೆ ರೋಗ ಬರದಂತೆ ನೋಡಿಕೊಳ್ಳುವುದು. ಅದಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ದಯವಿಟ್ಟು ಮನೆಯಲ್ಲೇ ಇರಿ. ಔಷಧಕ್ಕಾಗಿ ಅಥವಾ ಇನ್ಯಾವುದೇ ಅನಿವಾರ್ಯ ಕಾರಣಕ್ಕಾಗಿ ಹೊರಹೋಗುವ ಪರಿಸ್ಥಿತಿ ಬಂದರೆ ಖಡ್ಡಾಯವಾಗಿ ಮುಖಗವಸು ಧರಿಸಿ. ಸರ್ಕಾರದ ಭಾಗವಾಗಿ ನಾನು ಕೂಡಾ ನಿಮ್ಮನ್ನು ವಿನಂತಿಸುತ್ತೇನೆ. ಲಾಕ್ಡೌನ್ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಿ. ಅದನ್ನು ನಿಮಗಾಗಿ, ನಿಮ್ಮ ಕುಟುಂಬದವರಿಗಾಗಿ, ಜನರ ಆರೋಗ್ಯಕ್ಕಾಗಿ ಜಾರಿಗೆ ತರಲಾಗಿದೆ” ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಸದ್ಯ ಜನರ ಜೀವನಕ್ಕಿಂತ ಜನರ ಜೀವ ಉಳಿಸುವುದು ನಮ್ಮೆಲ್ಲರ ಆದ್ಯತೆಯಾಗಿದೆ. ಹಾಗಾಗಿ ಲಾಕ್ಡೌನ್ ಜಾರಿಗೊಳಿಸಲಾಗಿತ್ತು. ಈಗ ಅದನ್ನು ಮತ್ತೆ 19 ದಿನ ಮುಂದುವರಿಸಲಾಗಿದೆ. ಇದರಿಂದ ಬಹುತೇಕ ಕೈಗಾರಿಗಳು, ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಮುಚ್ಚಿವೆ. ಇದು ಶಾಶ್ವತ ಸ್ಥಿತಿಯೇನಲ್ಲ. ಉದ್ಯೋಗದಾತರಲ್ಲಿ ಕಳಕಳಿಯ ಮನವಿ. ಈ ಸಂದರ್ಭದಲ್ಲಿ ನೌಕರರನ್ನು ದಯವಿಟ್ಟು ಕೆಲಸದಿಂದ ತೆಗೆಯಬೇಡಿ ಎಂದು ಅವರು ವಿನಂತಿಸಿದ್ದಾರೆ.
ಈ ದಿಗ್ಬಂಧನದಿಂದ ಆರ್ಥಿಕ ದುರ್ಬಲರು, ಶ್ರಮಿಕವರ್ಗದವರು ತೀವ್ರ ತೊಂದರೆಗೊಳಗಾಗಿದ್ದಾರೆ. ಸರ್ಕಾರವು ಬಡವರ ಕಲ್ಯಾಣ ಯೋಜನೆ ಸೇರಿದಂತೆ ಹಲವು ಕ್ರಮಗಳನ್ನು ಜಾರಿಗೊಳಿಸಿದೆ. ಹಾಗಿದ್ದಾಗ್ಯೂ ನಮ್ಮ ಸುತ್ತಲಿನ ಬಡವರು ಉಪವಾಸ ಮಲಗದಂತೆ ನೋಡಿಕೊಳ್ಳುವ ಸಾಮಾಜಿಕ, ನೈತಿಕ ಜವಾಬ್ದಾರಿ ನಮ್ಮ ಮೇಲಿದೆ. ನಿಮಗಿದರ ಅರಿವಿರಬಹುದು. ಈ ಲಾಕ್ಡೌನ್ ಹೆಚ್ಚು ತೊಂದರೆಗೆ ಒಳಗಾಗುವವರು ಮನೆಯಲ್ಲಿರುವ ಹಿರಿಯರು. ಈಗಾಗಲೇ ಅವರು ಒಂದೆಲ್ಲಾ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅವರ ಬಗ್ಗೆ ವಿಶೇಷ ಕಾಳಜಿ ವಹಿಸೋಣ. ಅವರನ್ನು ಕೊರೋನಾ ಸೋಂಕಿನಿಂದ ದೂರ ಇಡಬೇಕು ಎಂದಾದರೆ ನಾವು ಮೊದಲು ಸೋಂಕು ತಗುಲದಂತೆ ಎಚ್ಚರ ವಹಿಸಬೇಕು ಎಂದಿದ್ದಾರೆ.
ಕೊರೋನಾ ಮಹಾಮಾರಿಯನ್ನು ಎದುರಿಸುವ ಇನ್ನೊಂದು ಪರಿಣಾಮಕಾರಿ ಮಾರ್ಗವೇನಂದರೆ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು. ಅದಕ್ಕಾಗಿ ನಮ್ಮ ಆಯುಷ್ ಇಲಾಖೆಯ ಸರಳ ಮಾರ್ಗಸೂಚಿಯನ್ನು ಅನುಸರಿಸಿ. ನಿಮ್ಮ ಆಹಾರ-ವಿಹಾರಗಳೇ ನಿಮ್ಮ ಆರೋಗ್ಯವನ್ನು ನಿರ್ಧರಿಸುತ್ತವೆ. ಆರೋಗ್ಯ ಸದೃಢವಾಗಿ ಇರಬೇಕಾದರೆ ಶಿಸ್ತುಬದ್ಧ ಜೀವನ ಅಗತ್ಯ. ಆದುದರಿಂದ ಸರ್ಕಾರ ಸಿದ್ಧಪಡಿಸಿರುವ 'ಆರೋಗ್ಯ ಸೇತು' ಆ್ಯಪನ್ನು ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ನೀವು ಕೊರೋನಾ ಸೋಂಕಿನ ವಲಯದಲ್ಲಿದ್ದರೆ ಅದು ನಿಮ್ಮನ್ನು ಎಚ್ಚರಿಸುತ್ತದೆ ಎಂದು ಸಚಿವ ಸದಾನಂದಗೌಡ ತಿಳಿಸಿದ್ದಾರೆ.