ನವದೆಹಲಿ: ಬಾಬರಿ ಮಸೀದಿ- ರಾಮಮಂದಿರ ಜಮೀನು ವಿವಾದದ ಬಗ್ಗೆ ಇಂದು ಸರ್ವೋಚ್ಚ ನ್ಯಾಯಾಲಯ ತನ್ನ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ವಿವಾದಿತ 2.77 ಎಕರೆ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 'ಗ್ರೀನ್' ಸಿಗ್ನಲ್ ನೀಡಿರುವ ಸುಪ್ರೀಂಕೋರ್ಟ್, ರಾಮಮಂದಿರ ಜಮೀನನ್ನು ಸಂಪೂರ್ಣವಾಗಿ ಟ್ರಸ್ಟ್ ವಶಕ್ಕೆ ನೀಡಬೇಕು. ಇದರ ಹೊಣೆ ಸರ್ಕಾರದ್ದು ಎಂದು ಸೂಚಿಸಿದೆ. ಇದೇ ವೇಳೆ ಮಸೀದಿ ನಿರ್ಮಾಣಕ್ಕೆ ಸುನ್ನಿ ವಕ್ಫ್ ಬೋರ್ಡ್ ಗೆ 5 ಎಕರೆ ಪರ್ಯಾಯ ಭೂಮಿ ನೀಡಲು ಸೂಚಿಸಿರುವ ಸರ್ವೋಚ್ಚ ನ್ಯಾಯಾಲಯ, ಸರ್ಕಾರಕ್ಕೆ 3 ತಿಂಗಳು ಗಡುವು ನೀಡಿದೆ.
ಶತಮಾನಗಳಿಂದಲೂ ವಿವಾದದ ಸ್ವರೂಪದಲ್ಲಿದ್ದ ಅಯೋಧ್ಯೆಯ ಭೂ ವಿಷಯಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಛ ನ್ಯಾಯಾಲಯದ ಸಂವಿಧಾನಿಕ ಪೀಠ ಇಂದು ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಿದೆ. 1528ರಿಂದ ಉದ್ಭವಿಸಿದ್ದ ಭೂ ವಿವಾದವು ಹಲವು ಆಯಾಮಗಳನ್ನು ಕಂಡಿದೆ. ರಾಜಕೀಯ ಸ್ಧಿತ್ಯಂತರಗಳನ್ನು ಸೃಷ್ಟಿಮಾಡಿದೆ. ಕೋಮು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತ್ತು. ಹೀಗೆ ಸಾಗಿಬಂದ ವಿವಾದ ಅಹಮದಾಬಾದ್ ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾದಿಯಾಗಿ ಸಂವಿಧಾನಿಕ ಪೀಠದವರೆಗೆ ಸಾಗಿ ಬಂದು ಸುದೀರ್ಘವಾಗಿ ವಿಚಾರಣೆ ನಡೆದು 2019ರ ಅಕ್ಟೋಬರ್ 16ರಂದು ತೀರ್ಪನ್ನು ಕಾಯ್ದಿರಿಸಿಲಾಗಿತ್ತು. ಅಂತಿಮ ಘಟ್ಟದಲ್ಲಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಎಸ್.ಎ. ಬೋಬ್ಡೆ, ಡಾ. ಡಿ.ವೈ. ಚಂದ್ರಚೂಡ್, ಎಸ್. ಅಬ್ದುಲ್ ನಜೀರ್ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ಸಂವಿಧಾನ ಪೀಠವು ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ತೀರ್ಪು ಪ್ರಕಟಿಸುವ ವಿಷಯವನ್ನು ಸುಪ್ರೀಂ ಕೋರ್ಟ್ನ ಮೂಲಗಳು ಖಚಿತಪಡಿಸುತ್ತಿದ್ದಂತೆ ದೇಶದಾದ್ಯಂತ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇಂದ್ರದ ಗೃಹ ಇಲಾಖೆ ಎಲ್ಲಾ ರಾಜ್ಯಗಳ ಗೃಹ ಇಲಾಖೆಗೂ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳುವಂತೆ, ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.