ಬೆಂಗಳೂರು: ಬಡಕುಟುಂಬದಲ್ಲಿ ಜನಿಸಿ, ರಂಗಭೂಮಿಯನ್ನು ಉಳಿಸಿ, ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕಾರಂತರು ಅತ್ಯಂತ ಸರಳ, ಪಾದರಸ ಸದೃಶ್ಯ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ಹಿರಿಯ ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ ಹೇಳಿದರು.ಇಂದು ಧಾರವಾಡದ ರಂಗಾಯಣದಲ್ಲಿ ಆಯೋಜಿಸಲಾಗಿದ್ದ ರಂಗಭೀಷ್ಮ ಬಿ.ವಿ. ಕಾರಂತರ ಜನ್ಮದಿನದ ಪ್ರಯುಕ್ತ ಭಾರತೀಯ ರಂಗಸಂಗೀತ ದಿನದ ಅಂಗವಾಗಿ ಬಿ.ವಿ. ಕಾರಂತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಕಾರಂತರು ಆಯುಷ್ಯಕ್ಕೆ ಸಾಲದಷ್ಟೂ ಕಾರ್ಯಗಳನ್ನು ಮಾಡುವ ಮೂಲಕ ಹಲವಾರು ಪ್ರತಿಭೆಗಳನ್ನು ಗುರುತಿಸಿ, ಅವರ ಬೆಳವಣಿಗೆಗೆ ಕಾರಣರಾಗಿದ್ದಾರೆ. ಕುವೆಂಪು ಸೇರಿದಂತೆ ಅನೇಕ ಶ್ರೇಷ್ಠ ನಾಟಕಕಾರರ ನಾಟಕಗಳನ್ನು ಪ್ರಸ್ತುತಪಡಿಸುತ್ತಿದ್ದರು. ಯಾವುದೇ ವಸ್ತುಗಳಿಂದ ಬರುತ್ತಿದ್ದ ಶಬ್ದದಿಂದ ಸಂಗೀತವನ್ನು ಸಂಯೋಜಿಸುವ ಮೂಲಕ ರಂಗಸಂಗೀತಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಅವರು ಹೇಳಿದರು.
ಭಾರತೀಯ ಸಂವಿಧಾನವು ಭಾಷೆಯನ್ನು ಯಾವುದೇ ವ್ಯಕ್ತಿಯ ಮೇಲೆ ಹೇರಿಲ್ಲ. ಬದಲಾಗಿ ವಿವಿಧ ಭಾಷೆಗಳನ್ನು ಕಲಿಯುವುದರ ಮೂಲಕ ಭಾಷಾಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಕಾರಂತರು ಅಭಿಪ್ರಾಯಪಡುತ್ತಿದ್ದರು ಎಂದು ಡಾ. ಬಾಳಣ್ಣ ಶೀಗಿಹಳ್ಳಿ ತಿಳಿಸಿದರು.ಹಿರಿಯ ರಂಗ ಸಂಘಟಕ ಹರ್ಷ ಡಂಬಳ ಮಾತನಾಡಿ, ಬಿ.ವಿ ಕಾರಂತರ ವ್ಯಕ್ತಿತ್ವವುಳ್ಳ ರಂಗಕರ್ಮಿಯನ್ನು ಇಂದಿನ ಜನಾಂಗ ಕಳೆದುಕೊಂಡಿದೆ. ಕಾರಂತರು ಯಾವುದೇ ತರಹದ ಅಪೇಕ್ಷೆಯನ್ನು ಪಡುತ್ತಿರಲಿಲ್ಲ. ಬೇರೆಯವರಿಗೆ ಕಾಯದೇ ರಂಗಸಜ್ಜಿಕೆಗಳನ್ನು ಸ್ವತಃ ತಾವೇ ಮಾಡುತ್ತಿದ್ದರು. ಸ್ವಾಭಿಮಾನ ಹೊಂದಿದ ಕಾರಂತರು ಎಲ್ಲರೊಂದಿಗೆ ಆತ್ಮೀಯತೆ ಹಾಗೂ ಸ್ನೇಹಮಯ ಭಾವನೆಯನ್ನು ಹೊಂದಿದ್ದರು ಎಂದು ಹೇಳಿದರು.
ರಂಗಾಯಣದ ನಿದೇಶಕರಾದ ರಮೇಶ ಪರವಿನಾಯ್ಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರಂತರ ರಂಗಭೂಮಿಯ ಕುರಿತು ಹಲವಾರು ಕನಸನ್ನು ಕಂಡಿದ್ದರು. ಅವರ ಕನಸಿನಂತೆ ಮೈಸೂರು, ಕಲಬುರಗಿ, ಶಿವಮೊಗ್ಗ ಹಾಗೂ ಧಾರವಾಡದಲ್ಲಿ ರಂಗಾಯಣವನ್ನು ಸ್ಥಾಪಿಸಿ, ಗ್ರಾಮೀಣ ಸೇರಿದಂತೆ ವಿವಿಧ ಭಾಗಗಳ ರಂಗ ಕಲಾವಿದರಿಗೆ ತಮ್ಮ ಪ್ರತಿಭೆಗಳನ್ನು ಪ್ರಸ್ತುತಪಡಿಸಲು ಅವಕಾಶ ಕಲ್ಪಿಸಿದ್ದಾರೆ. ಅದರಂತೆ ಕಲಾವಿದರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ರಂಗಭೂಮಿ ಏಳಿಗೆಗೆ ಶ್ರಮಿಸಬೇಕು ಎಂದು ಹೇಳಿದರು.
ರಂಗಸಮಾಜದ ಸದಸ್ಯರಾದ ಹಿಪ್ಪರಗಿ ಸಿದ್ಧರಾಮ ಮಾತನಾಡುತ್ತಾ ಇತಿಹಾಸ, ಪರಂಪರೆ ಮತ್ತು ಸಂಸ್ಕøತಿಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯುವ ದಿಶೆಯಲ್ಲಿ ರಂಗದ ಇತಿಹಾಸ, ರಂಗ ಪರಂಪರೆ ಮತ್ತು ರಂಗಸಂಸ್ಕøತಿಗಳ ಪ್ರತೀಕವಾದ ಹಿರಿಯರನ್ನು ನೆನಪಿಸಿಕೊಳ್ಳುವ ದಿಶೆಯಲ್ಲಿ ಇಂದು ರಂಗಭೀಷ್ಮ ಬಿ.ವಿ. ಕಾರಂತರ ಜಯಂತಿ ನಿಮಿತ್ತವಾಗಿ ಭಾರತೀಯ ರಂಗಸಂಗೀತ ದಿನವನ್ನಾಗಿ ಆಚರಿಸುವುದು ಬಹಳ ಅರ್ಥಪೂರ್ಣವಾಗಿದೆ ಎಂದು ಅಭಿಪ್ರಾಯಪಟ್ಟರು.ಡಾ. ಹೆಲನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಲಾವಿದ ಕೃಷ್ಣಮೂರ್ತಿ ಗಾಂವಕರ ಕಾರ್ಯಕ್ರಮ ನಿರೂಪಿಸಿದರು. ರಂಗಾಯಣದ ಆಡಳಿತಾಧಿಕಾರಿ ಮಂಜುಳಾ ಯಲಿಗಾರ ಸ್ವಾಗತಿಸಿ, ವಂದಿಸಿದರು. ನಂತರ ಕಲಾವಿದೆ ಸುನಂದಾ ನಿಂಬನಗೌಡರ ಹಾಗೂ ತಂಡದವರಿಂದ ಬಿ.ವಿ. ಕಾರಂತರ ರಂಗಸಂಗೀತ ಪ್ರಸ್ತುತಿ ನಡೆಯಿತು.